ಬಿಜೆಪಿ ಚುನಾವಣಾ ಜಾಹಿರಾತಿನಲ್ಲಿ ರಾಷ್ಟ್ರಧ್ವಜ ಬಳಕೆ: ಕಾಂಗ್ರೆಸ್ ಅರೋಪ
ಗದಗ ಏಪ್ರಿಲ್ 19: ಭಾರತೀಯ ಜನತಾ ಪಕ್ಷ ದಿನಾಂಕ 17 ನೇ ಏಪ್ರಿಲ್ 2019 ರಂದು ರಾಜ್ಯದ ಪ್ರಮುಖ ದಿನ ಪತ್ರಿಕೆಗಳಲ್ಲಿ ನೀಡಿರುವ ಚುನಾವಣಾ ಜಾಹೀರಾತಿನಲ್ಲಿ ರಾಷ್ಟ್ರಧ್ವಜವನ್ನು ಬಳಸಿಕೊಂಡಿದೆ. ಇದು ದೇಶದ ನ್ಯಾಷನಲ್ ಫ್ಲಾಗ್ ಕೋಡ್ ನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದನ್ನು ನೀಡಿದವರ ವಿರುದ್ದ ರಾಜ್ಯ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ್ ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗದಗ ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ತಮ್ಮ ಜಾಹೀರಾತಿನಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ಜನರನ್ನು ಭಾವೋದ್ರೇಕಗೊಳಿಸುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.
'ಮೊಟ್ಟ ಮೊದಲ ಬಾರಿಗೆ ರೈತರನ್ನು ಋಣಮುಕ್ತರನ್ನಾಗಿಸಿದ್ದು ಕಾಂಗ್ರೆಸ್'
ನ್ಯಾಷನಲ್ ಫ್ಲಾಗ್ ಕೋಡ್ ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ನಮೂದಿಸಲಾಗಿದೆ. ಯಾವುದೇ ರಾಜಕೀಯ ಉದ್ದೇಶಗಳಿಗೊಸ್ಕರ ರಾಷ್ಟ್ರಧ್ವಜ ಅಥವಾ ರಾಷ್ಟ್ರೀಯ ಲಾಂಚನವನ್ನು ಬಳಸುವುದು ಈ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ, ಅಧಿಕಾರದಲ್ಲಿರುವ ಬಿಜೆಪಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ತಮ್ಮ ಚುನಾವಣಾ ಜಾಹೀರಾತಿನಲ್ಲಿ ರಾಷ್ಟ್ರಧ್ವಜವನ್ನು ಬಳಸಿಕೊಳ್ಳುವ ಮೂಲಕ ರಾಷ್ಟ್ರಧ್ವಜದ ನಿಯಮವನ್ನು ಉಲ್ಲಂಘಿಸಿದೆ ಎಂದರು.
ಬಿಜೆಪಿ ವಿರುದ್ಧ ಆಯೋಗದಿಂದ ಕ್ರಮವಿಲ್ಲ
ಅನೇಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಭಾರತೀಯ ಜನತಾ ಪಕ್ಷದ ವಿರುದ್ದ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಈ ಜಾಹೀರಾತನ್ನ ನೀಡಿದವರ ವಿರುದ್ದ ತಕ್ಷಣ ಕ್ರಮಕೈಗಳ್ಳುವ ಮೂಲಕ ಚುನಾವಣಾ ಪಾವಿತ್ರತ್ಯತೆಯನ್ನು ಕಾಪಾಡಬೇಕಾಗಿದೆ ಎಂದು ಆಗ್ರಹಿಸಿದರು.
ಮೋದಿ ಸೇನೆ ಎಂದ ಯೋಗಿ ಆದಿತ್ಯನಾಥ್
ಮೋದಿ ಸೇನೆ ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮೇಲೆ ಕೇಂದ್ರ ಚುನಾವಣಾ ಆಯೋಗ ಸಣ್ಣ ಮಟ್ಟದ ಕ್ರಮವನ್ನು ತಗೆದುಕೊಂಡಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಆದಿತ್ಯನಾಥ್ ಅವರು ಇಂತಹ ಕ್ರಮ ಆಯೋಗ ಕೈಗೊಂಡ ಮೇಲೆ ಸಿಎಂ ಹುದ್ದೆಯನ್ನು ತ್ಯಜಿಸಿದ್ದರೆ ಅದಕ್ಕೆ ನ್ಯಾಯ ವೊದಗುತ್ತಿತ್ತು ಎಂದರು.
ರಾಜಸ್ಥಾನದ ರಾಜ್ಯಪಾಲರ ವಿರುದ್ಧ ಕ್ರಮಕ್ಕೆ ಆಗ್ರಹ
ಇನ್ನೊಂದೆಡೆ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ರಾಜಸ್ಥಾನದ ರಾಜ್ಯಪಾಲರ ಮೇಲೆ ಕ್ರಮಕೈಗೊಳ್ಳುವಂತೆ ವರದಿಯನ್ನು ನೀಡಿದೆ. ಆದರೆ ಚುನಾವಣಾ ಪಾವಿತ್ರ್ಯತೆಯನ್ನು ಕಾಪಾಡುವ ಮಹತ್ವದ ಹುದ್ದೆಯಲ್ಲಿ ಇರುವ ರಾಷ್ಟ್ರಪತಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಆಶ್ಚರ್ಯಕರ. ಇದರ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಈಗಲೂ ಕಾಲ ಮಿಂಚಿಲ್ಲ ಎಂದ ಹೆಚ್ ಕೆ ಪಾಟೀಲರು, ತಕ್ಷಣ ಅವರನ್ನು ಚುನಾವಣೆ ಮುಗಿಯುವ ವರೆಗಾದರೂ ಕೂಡಾ ರಾಜ್ಯಪಾಲ ಹುದ್ದೆಯಿಂದ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ
ಕಾಂಗ್ರೆಸ್ ಪಕ್ಷ ಬಡವರನ್ನು ಬಡತನ ರೇಖೆಯಿಂದ ಮೇಲೆ ಎತ್ತಲು ಅಗತ್ಯವಿರುವ ಹಾಗೂ ಅನುಷ್ಠಾನಗೊಳಿಸಲು ಸಾಧ್ಯವಿರುವ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈ ಪ್ರಣಾಳಿಕೆಯನ್ನು ಖ್ಯಾತ ಅರ್ಥಶಾಸ್ತ್ರಜ್ಞರ ಸಲಹೆಯಂತೆ ರಚಿಸಲಾಗಿದೆ. ಇಂತಹ ಪ್ರಣಾಳಿಕೆಯ ಬಗ್ಗೆ ಸಾಂವಿಧಾನಿಕ ಹುದ್ದೆಯಲ್ಲಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಟೀಕೆಯನ್ನು ಮಾಡಿದ್ದಾರೆ. ಪ್ರಣಾಳೀಕೆಯ ಬಗ್ಗೆ ಟೀಕೆಯನ್ನು ಮಾಡಬೇಕಾದಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಹೇಳಿಕೆ ನೀಡಲಿ. ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಇಂತಹ ಹೇಳಿಕೆಯನ್ನು ನೀಡುವುದು ಸಮಂಜಸವಲ್ಲ ಎಂದರು.
ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹ
ಅಲ್ಲದೆ, ಸೇನೆಯ ಸಮವಸ್ತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರ ವಿರುದ್ದವೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಚುನಾವಣೆಯ ಸಂಧರ್ಭದಲ್ಲಿ ಆಯೋಗಕ್ಕೆ ಎಲ್ಲಾ ರೀತಿಯ ಅಧಿಕಾರವನ್ನು ನೀಡಲಾಗಿರುತ್ತದೆ. ಈ ಅಧಿಕಾರವನ್ನು ಬಳಸಿಕೊಂಡು ನರೇಂದ್ರ ಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದರು.