ಗದಗದಲ್ಲಿ ಬೆಳೆ ಜಲಾವೃತ, ಪರಿಹಾರದ ಭರವಸೆ ಕೊಟ್ಟ ಬಿ. ಸಿ. ಪಾಟೀಲ್
ಗದಗ, ಆಗಸ್ಟ್, 09: ಗದಗ ಜಿಲ್ಲೆಯಲ್ಲಿ ಅತೀಯಾದ ಮಳೆಯಿಂದಾಗಿ ಹೆಸರು ಸೇರಿದಂತೆ ಇತರೆ ಬೆಳೆಗಳು ನೀರುಪಾಲಾಗಿವೆ. ಅದರಲ್ಲೂ ಹೆಚ್ಚಾಗಿ ಹೆಸರು ಬೆಳೆ ಬೆಳೆದವರ ಪಾಡು ಹೇಳತೀರದಾಗಿದೆ. ಹೀಗೆ ಹಾನಿಗೊಳಗಾದ ಕೃಷಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ. ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.
ಗದಗ ತಾಲೂಕಿನ ಹೊಂಬಳ, ಎಚ್.ಎಸ್.ವೆಂಕಟಪುರ ಹಾಗೂ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಗಳಲ್ಲಿ ಮಳೆಯಿಂದಾಗಿ ನೆಲಕಚ್ಚಿರುವ ಹೆಸರು ಬೆಳೆಯನ್ನು ಪರಿಶೀಲಿಸಿದರು.
Breaking:ಕರ್ನಾಟಕದಲ್ಲಿ ತಗ್ಗಿದ ಮುಂಗಾರು ಆರ್ಭಟ: 3ಜಿಲ್ಲೆಗೆ ಭಾರಿ ಮಳೆ
ಬಳಿಕ ಮಾತನಾಡಿದ ಸಚಿವರು, "ಜಿಲ್ಲೆಯಲ್ಲಿ ಕಟಾವಿಗೆ ಬಂದಂತಹ ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಈ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಮೀಕ್ಷೆ ನಡೆಸುವಂತೆ ತಿಳಿಸಿದ್ದೇನೆ. ಹಾಗೂ ಬೆಳೆಗಳು ಹಾನಿಯಾಗಿ ಸಂಕಷ್ಟದಲ್ಲಿರುವವರಿಗೆ ಶೀಘ್ರ ಪರಿಹಾರ ಒದಗಿಸಲು ಸೂಚಿಸಲಾಗಿದೆ" ಎಂದು ಸಚಿವರು ಹೇಳಿದರು.
"ಜಿಲ್ಲೆಯಲ್ಲಿ ಒಟ್ಟು 93 ಸಾವಿರ ಹೆಕ್ಟೇರ್ ಕೃಷಿ ಬೆಳೆಗಳು ಜಲಾವೃತವಾಗಿದ್ದು, ಇದರಲ್ಲಿ 73 ಸಾವಿರ ಹೆಕ್ಟೇರ್ ಪ್ರದೇಶಲ್ಲಿರುವ ಹೆಸರು ಬೆಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ನಿಖರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ಹಾನಿಯಾದ ರೈತರ ಕುಟುಂಬಕ್ಕೆ ಸರ್ಕಾರದ ನಿಯಮಾನುಸಾರ ಪರಿಹಾರವನ್ನು ತುರ್ತಾಗಿ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ" ಎಂದು ಭರವಸೆ ನೀಡಿದರು.
ಗದಗ ಜಿಲ್ಲೆಯಲ್ಲಿ ಮಳೆರಾಯ ಆರ್ಭಟಿಸಿದ್ದು, ಅಲ್ಲಿನ ರೈತರ ಪಾಡು ಹೇಳತೀರದಾಗಿದೆ. ಹಾಕಿದ ಬೆಳೆಗಳೆಲ್ಲ ನೀರುಪಾಲಾಗಿ ಅನ್ನದಾತ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.