ಆರೋಗ್ಯ ಸಚಿವ ಶ್ರೀರಾಮುಲು ಆಪ್ತನ ಮೇಲೆ ದೂರು ದಾಖಲು, ಬಿಜೆಪಿಯಿಂದ ಅಮಾನತು!
ಗದಗ, ಜು. 13: ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತನ ಮೇಲೆ ದೂರು ದಾಖಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ವಿಪತ್ತು ನಿರ್ವಹಣಾ ಕಾಯಿದೆಯಡಿ ಸ್ವಯಂ ದೂರು ದಾಖಲಿಸಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಇಡೀ ರಾಜ್ಯ ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸಲು ಲಾಕ್ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ರಾಜಕಾರಣಗಳು, ಅವರ ಹಿಂಬಾಲಕರು ಲಾಕ್ಡೌನ್ ನಿಯಮಗಳನ್ನು ಮುರಿಯುವುದು ಸಾಮಾನ್ಯ ಎಂಬಂತಾಗಿದೆ. ಸರ್ಕಾರ ಇದೀಗ ಇದೆಲ್ಲದಕ್ಕೂ ಕಡಿವಾಣ ಹಾಕಲು ಮುಂದಾಗಿದೆ. ಜೊತೆಗೆ ಆರೋಗ್ಯ ಸಚಿವ ಶ್ರೀರಾಮುಲು ಆಪ್ತನ ಮೇಲೆ ವಿಪತ್ತು ನಿರ್ವಹಣಾ ಕಾಯಿದೆಯಡಿ ದೂರು ದಾಖಲಾಗಿದೆ. ಜೊತೆಗೆ ರಾಜ್ಯ ಬಿಜೆಪಿ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದಿಂದ ಉಚ್ಛಾಟನೆ ಮಾಡಿದೆ.
ದೂರು ದಾಖಲು
ಲಾಕ್ಡೌನ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬದ ಪಾರ್ಟಿ ಮಾಡಿಕೊಂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಸಹಾಯಕ, ಗದಗ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಸ್.ಎಚ್. ಶಿವನಗೌಡ ವಿರುದ್ಧ ಕೊನೆಗೂ ಪ್ರಕರಣ ದಾಖಲಾಗಿದೆ.
ಕರ್ಫ್ಯೂ ಉಲ್ಲಂಘಿಸಿ ಬಿಜೆಪಿ ಮುಖಂಡನ ಭರ್ಜರಿ ಬರ್ಥ್ಡೇ ಗುಂಡಿನ ಪಾರ್ಟಿ!
ಗದಗ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಗರ ಪೊಲೀಸರು ವಿಪತ್ತು ನಿರ್ವಹಣಾ ಕಾಯಿದೆ ಅಡಿ ಹಾಗೂ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಸ್ವಯಂ ದೂರು ದಾಖಲಿಸಿದ್ದಾರೆ. ಕಳೆದ ಜುಲೈ 10 ರಂದು ಗದಗದ ಶ್ರೀನಿವಾಸ್ ಭವನದಲ್ಲಿ ಅನುಮತಿ ಪಡೆಯದೇ ಬರ್ಥ್ಡೇ ಪಾರ್ಟಿಯನ್ನು ಶಿವನಗೌಡ ಆಯೋಜಿಸಿದ್ದರು. ಜೊತೆಗೆ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಆಪ್ತರು, ಬಿಜೆಪಿ ಕಾರ್ಯಕರ್ತರು ಗುಂಪು ಗುಂಪಾಗಿ ಕುಣಿದ ಕುಪ್ಪಳಿಸಿದ್ದರು.
ಪಕ್ಷದಿಂದ ಉಚ್ಛಾಟನೆ
ವಿಪತ್ತು ನಿರ್ವಹಣಾ ಕಾಯಿದೆಯಡಿ ದೂರು ದಾಖಲಾಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಬಿಜೆಪಿ, ಶಿವನಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು, ಪಕ್ಷದ ವರಿಷ್ಠರ ಸೂಚನೆಯಂತೆ ಎಚ್.ಎಸ್. ಶಿವನಗೌಡರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶದ, ರಾಜ್ಯದ ಹಾಗೂ ಜಿಲ್ಲೆಯ ಜನರು ಕೊರೊನಾ ವೈರಸ್ ವಿರದ್ಧ ಹೋರಾಡುತ್ತಿದ್ದಾರೆ. ಕೋವಿಡ್ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿಯುತ ಸಂದರ್ಭದಲ್ಲಿರುವ ನೀವು, ನಿಮ್ಮ ನೂರಾರು ಆಪ್ತರು ಸ್ನೇಹಿತರೊಂದಿಗೆ ಪಾನಮತ್ತರಾಗಿ ಕುಣಿದಾಡಿದ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ನಿಮ್ಮ ವರ್ತನೆಯಿಂದ ಪಕ್ಷದ ಮುಖಂಡರು ಮುಜುಗುರಗೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಉಚ್ಛಾಟನೆ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿ ಗದಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಚ್.ಎಸ್. ಶಿವನಗೌಡ ಅವರು ನಗರದ ರಿಂಗ್ರಸ್ತೆಯ ಶ್ರೀನಿವಾಸ ಭವನದಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು.
ಜುಲೈ 11 ರಂದು ತಡರಾತ್ರಿವರೆಗೂ ನಡೆದಿದ್ದ ಪಾರ್ಟಿಯಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಬರ್ಥ್ಡೆ ಪಾರ್ಟಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿತ್ತು.
ಕೊರೊನಾ ವೈರಸ್ ಸಂಕಷ್ಟ
ಗದಗ ಜಿಲ್ಲೆಯಲ್ಲಿಯೂ ಕೊರೊನಾ ವೈರಸ್ ಸೋಂಕು ತೀವ್ರವಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 9 ಜನರು ಮೃತಪಟ್ಟಿದ್ದಾರೆ. ಜೊತೆಗೆ ಸೋಂಕಿತರ ಸಂಖ್ಯೆ 316ಕ್ಕೆ ಏರಿಕೆಯಾಗಿದೆ. ನಗರದಲ್ಲಿ 70ಕ್ಕೂ ಹೆಚ್ಚು ಕಂಟೇನ್ಮೆಂಟ್ ಝೋನ್ಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಪ್ರತಿದಿನ ಸೋಂಕಿತರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಸದರ್ಭದಲ್ಲಿ ಇನ್ನೂರಕ್ಕು ಹೆಚ್ಚು ಜನರು ಸಾಮಾಜಿಕ ಅಂತರ ಬಿಟ್ಟು ಹುಟ್ಟುಹಬ್ಬದ ಪಾರ್ಟಿ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.