ಕರ್ಫ್ಯೂ ಉಲ್ಲಂಘಿಸಿ ಬಿಜೆಪಿ ಮುಖಂಡನ ಭರ್ಜರಿ ಬರ್ಥ್ಡೇ ಗುಂಡಿನ ಪಾರ್ಟಿ!
ಬೆಂಗಳೂರು, ಜು. 11: ರಾಜ್ಯದಲ್ಲಿ ಕೊರೊನಾ ವೈರಸ್ಗೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಕಷ್ಟು ರಾಜಕಾರಣಿಗಳಿಗೂ ಸೋಂಕು ತಗುಲಿದೆ. ಮತ್ತಷ್ಟು ರಾಜಕಾರಣಿಗಳು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಕೆಲವು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
ಸಿಎಂ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದರಿಂದ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸುವಂತೆ ಯಡಿಯೂರಪ್ಪ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಚಿವ ಶ್ರೀರಾಮುಲು ಆಪ್ತ ಮಹೇಶ್ ನಿಗೂಢ ಸಾವಿನ ತನಿಖೆಗೆ ಆಗ್ರಹ
ಆದರೆ ರಾಜಕಾರಣಿಗಳಿಗೆ ಹಾಗೂ ಅವರ ಆಪ್ತರಿಗೆ ಮಾತ್ರ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಸಾಮಾಜಿಕ ಅಂತರ ಮರೆತು ಮದುವೆಯಲ್ಲಿ ಭಾಗವಹಿಸಿದ್ದು ಆಯಿತು, ಮೆರವಣಿಗೆ ಮಾಡಿಸಿಕೊಂಡಿದ್ದೂ ಆಯಿತು, ಇದೀಗ ಭರ್ಜರಿ ಬರ್ಥ್ ಡೇ ಪಾರ್ಟಿಯನ್ನೂ ಮಾಡಿ ಮುಗಿಸಿದ್ದಾರೆ. ಕೊರೊನಾ ವೈರಸ್ ಹರಡದಂತೆ ತಡೆಯಲು ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹೇರಲಾಗಿದೆ. ರಾತ್ರಿ ಜನ ಸಾಮಾನ್ಯರು ಹೊರಗೆ ಬಂದರೆ ಲಾಠಿ ಏಟು ಬೀಳುತ್ತಿವೆ. ಆದರೆ ರಾಜ್ಯದ ಪ್ರಭಾವಿ ಸಚಿವರ ಆಪ್ತ, ಬಿಜೆಪಿ ಮುಖಂಡರೊಬ್ಬರು ತಡರಾತ್ರಿವರೆಗೂ ಗುಂಡು-ತುಂಡಿನೊಂದಿಗೆ ಭರ್ಜರಿ ಬರ್ಥ್ಡೇ ಮಾಡಿದ್ದಾರೆ.
ಬಿಜೆಪಿ ಮುಖಂಡನ ಗುಂಡು ಪಾರ್ಟಿ
ಕೊರೊನಾ ವೈರಸ್ ಹರಡುವುನ್ನು ತಡೆಯಲು ರಾಜ್ಯದಲ್ಲಿ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಮದುವೆ ಸಮಾರಂಭದಲ್ಲಿಯೂ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ ಎಂದು ಕಾನೂನು ಮಾಡಲಾಗಿದೆ. ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮದುವೆ ಮಾಡುವುದನ್ನೇ ಸರ್ಕಾರ ನಿಷೇಧಿಸಿದೆ. ಆದರೆ ಲಾಕ್ಡೌನ್ ಕಾನೂನುಗಳು ಏನಿದ್ದರು ಕೇವಲ ಸಾಮಾನ್ಯ ಜನರಿಗೆ ಎಂಬಂತಾಗಿದೆ.
ಜನರು ಗುಂಪುಗೂಡಬಾರದು ಎಂದು ರಾಜ್ಯ ಬಿಜೆಪಿ ಸರ್ಕಾರ ಜನರ ಮೇಲೆ ರಾತ್ರಿ ಕರ್ಫ್ಯೂ ಹೇರಿದೆ. ನೈಟ್ ಲೈಫ್ನಲ್ಲಿ ಸೋಂಕು ಹರಡಬಹುದು ಎಂಬುದು ಸರ್ಕಾರದ ಮುಂದಾಲೋಚನೆ. ಆದರೆ ಸ್ವತಃ ಬಿಜೆಪಿ ಮುಖಂಡರೇ ತಮ್ಮ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಸೇರಿಸಿಕೊಂಡು ಗುಂಡು-ತುಂಡಿನೊಂಡಿಗೆ ಭರ್ಜರಿ ಬರ್ಥ್ಡೇ ಪಾರ್ಟಿಯನ್ನು ಬಿಜೆಪಿ ಮುಖಂಡರೊಬ್ಬರು ಮಾಡಿದ್ದಾರೆ. ಅದು ಕೂಡ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತ ಎಂಬುದು ಗಮನಿಸಬೇಕಾದ ಅಂಶ.
ಶ್ರೀರಾಮುಲು ಆಪ್ತ
ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತ, ಗದಗ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ್ ನಿನ್ನೆ (ಜು. 11) ರಾತ್ರಿ ಭರ್ಜರಿ ಗುಂಡು-ತುಂಡಿನ ಕಾಕ್ಟೇಲ್ ಪಾರ್ಟಿ ಮಾಡಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಅವರ ಗದಗ್ನ ಆಪ್ತ ಸಹಾಯಕ ಎಸ್ ಎಚ್ ಶಿವನಗೌಡರ ತಮ್ಮ ಬರ್ಥ್ ಡೇ ನಿಮಿತ್ತ ನಗರದ ಶ್ರೀನಿವಾಸ ಭವನದಲ್ಲಿ ಗುಂಡು ತುಂಡು ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಆ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಮರೆತು ಸುಮಾರು ಇನ್ನೂರಕ್ಕೂ ಹೆಚ್ಚು ಜನ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವು ಆಪ್ತರು ಭಾಗಿಯಾಗಿದ್ದರು. ಇನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದ ಜನರು ಎಣ್ಣೆಯ ಗಮ್ಮತ್ತಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ವಿಡಿಯೋ ವೈರಲ್: ಶ್ರೀರಾಮುಲು ರಾಜೀನಾಮೆ ನೀಡಿ ಎಂದ ಬಿಂದು ಗೌಡ
ಪಾರ್ಟಿಗೆ ಭಾರೀ ಆಕ್ಷೇಪ
ಕೊರೊನಾ ವೈರಸ್ ಆತಂಕದ ಮಧ್ಯೆ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಎಸ್.ಎಚ್. ಶಿವನಗೌಡರ್ ಭರ್ಜರಿಯಾಗಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬರ್ಥ್ ಡೇ ಪಾರ್ಟಿ ತಡ ರಾತ್ರಿವರೆಗೂ ನಡೆದಿದ್ದು, ನಿಷೇಧಾಜ್ಞೆ ನಡುವೆ ಸಚಿವ ಶ್ರೀರಾಮುಲು ಆಪ್ತನ ಬರ್ಥ್ ಡೇ ಪಾರ್ಟಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮದುವೆ, ಸಭೆ ಸಮಾರಂಭಗಳಿಗೆ ಅಷ್ಟೊಂದು ಸರಳವಾಗಿ ಅನುಮತಿ ದೊರೆಯದ ಈ ಸಮಯದಲ್ಲಿ ಇವರಿಗೆ ಅನುಮತಿ ನೀಡಿದವರು ಯಾರು ಎಂಬ ಅನುಮಾನ ವ್ಯಕ್ತವಾಗಿದೆ. ಮಾತೆತ್ತಿದರೆ ಸಾಕು ತಬ್ಲಿಘಿ ವೈರಸ್ ಎನ್ನುವ ರಾಜ್ಯ ಬಿಜೆಪಿ ಮುಖಂಡರು, ತಮ್ಮದೇ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ್ ಗುಂಡು ಪಾರ್ಟಿಯನ್ನು ನೋಡಿಯೂ ಸುಮ್ಮನಿರುವುದು ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಗದಗದಲ್ಲಿ ತೀವ್ರವಾಗಿದೆ ಸೋಂಕು
ಗದಗ್ನಲ್ಲಿ ತೀವ್ರವಾಗಿ ಹರಡಿದ್ದ ಕೊರೊನಾ ವೈರಸ್ ನಿಯಂತ್ರಿಸಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಗದಗ್ನಲ್ಲಿ ಈಗಾಗಲೇ 6 ಜನರು ಕೊರೊನಾ ವೈರಸ್ಗೆ ತುತ್ತಾಗಿ ಬಲಿಯಾಗಿದ್ದಾರೆ.
ಜೊತೆಗೆ ಸೋಂಕಿತರ ಸಂಖ್ಯೆ 262ಕ್ಕೆ ಏರಿಕೆಯಾಗಿದೆ. ಜೊತೆಗೆ ನಿನ್ನೆಯೂ ಮತ್ತೆ 19 ಜನರಲ್ಲಿ ಸೋಂಕು ದೃಢಪಟ್ಟಿದೆ. ಜನರು ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರನ್ನು ಗುಂಪುಗೂಡಿಸಿಕೊಂಡು ಗುಂಡು-ತುಂಡಿನ ಬರ್ಥ್ ಡೇ ಪಾರ್ಟಿ ಮಾಡಿರುವುದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಜಿಲ್ಲಾ ಮುಖಂಡನ ಮೇಲೆ ಕ್ರಮ ಕೈಗೊಳ್ಳುತ್ತಾರೊ ಅಥವಾ ಮುಗುಮ್ಮಾಗಿ ಇರುತ್ತಾರೊ? ಎಂಬುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಕ್ಷಣ ಆರೋಗ್ಯ ಸಚಿವ ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹಾಗೂ ಗದಗ್ ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಗದಗ್ ಜನರಿದ್ದಾರೆ.