ರಾಜ್ಯದಲ್ಲಿ ಆರಂಭಗೊಳ್ಳದ ಖರೀದಿ ಕೇಂದ್ರ: ಯಡಿಯೂರಪ್ಪ ಆಕ್ರೋಶ
ಬೆಂಗಳೂರು, ಆಗಸ್ಟ್ 13: ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಆಹಾರ ಧಾನ್ಯಗಳ ಖರೀದಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಹೆಸರು ಬೆಳೆಗೆ 6925 ರೂ. ಘೋಷಣೆ ಮಾಡಿದೆ ಆದರೆ ಇದುವರೆಗೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಪನೆಗೆ ಮೀರಿ ಭೀಕರ ಬರಗಾಲದ ವಾತಾವರಣವಿದೆ. ರಾಜ್ಯದಲ್ಲಿ ಕೆಲವೆಡೆ ಮಾತ್ರ ಮಳೆ ಬಂದಿದೆ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಿಲ್ಲ, ರಾಜ್ಯದ 13 ಜಿಲ್ಲೆಗಳಲ್ಲಿ ಮಳೆಯಾಗದೆ ಇನ್ನೂ ಬರದ ಪರಿಸ್ಥಿತಿ ಎದುರಿಸುತ್ತಿದೆ. ಎನ್ ಮಹೇಶ್ ಗದಗ ಜಿಲ್ಲೆಯ ಉಸ್ತುವಾರಿಯಾಗಿದ್ದರೂ ಒಮ್ಮೆಯೂ ಗದಗ ಜಿಲ್ಲೆಯನ್ನು ತಿರುಗಿ ನೋಡಿಲ್ಲ ಎಂದರು.
ಯಾವ ಬೆಳೆಗಳ ಬೆಂಬಲ ಬೆಲೆ ಎಷ್ಟು ಏರಿಕೆ ಮಾಡಿದೆ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಒಟ್ಟು 14 ಮುಂಗಾರಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದೆ. ಭತ್ತಕ್ಕೆ ನೀಡುವ ಬೆಂಬಲ ಬೆಲೆ 200 ರೂಪಾಯಿ ಏರಿಕೆಯಾಗಿದೆ. ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, 200 ರೂಪಾಯಿ ಪ್ರತಿ ಕ್ವಿಂಟಾಲ್ಗೆ ಬೆಂಬಲ ಬೆಲೆ ಏರಿಸಲಾಗಿದೆ.
ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಅಭಿವೃದ್ಧಿ ಬಗ್ಗೆ ಅಧಿಕಾರಿಗಳ ಬಗ್ಗೆ ಚರ್ಚಿಸಬೇಕು, ರಾಜ್ಯ ಸರ್ಕಾರ ತಕ್ಷಣ ಹೆಸರು ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ಏರೋ ಶೋ ಲಖ್ನೌಗೆ ಸ್ಥಳಾಂತರವಾಗುವುದಿಲ್ಲ, ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹಾಗೂ ಸಚಿವ ಡಿಕೆ ಶಿವಕುಮಾರ್ ಈ ಕುರಿತು ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ. ಬಿಜೆಪಿಯು ಬೆಂಗಳೂರಿನಲ್ಲಿ ನಡೆಯುವ ಏರೋ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.