ಬಿಎಸ್ ವೈ ನಿಂದನೆ: ವೀರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಗದಗ, ಜನವರಿ 1: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಹೇಳನ ಮಾಡಿದ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಅವರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಡಿ.31 ರಂದು ಗದಗದ ನರಗುಂದದಲ್ಲಿ ನಡೆದಿದೆ.
ರಾಜಕೀಯ ಹಾಕ್ಯಾಟದಲ್ಲಿ ಹುಗಿದು ಹೋಗದಿರಲಿ ರೈತರ ಹೋರಾಟ
ಇತ್ತೀಚೆಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ಅವರು ಮಹಾದಾಯಿ ನದಿ ನೀರು ಹಂಚಿಕೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಪತ್ರ ಫಲಕಾರಿಯಾಗಿಲ್ಲ ಎಂದು ದೂರಿ ಬೆಂಗಳೂರಿನ ಬಿಜೆಪಿ ಕಚೇರಿ ಎದುರು ವೀರೇಶ ಮತ್ತವರ ಬೆಂಬಲಿಗರು ಹೋರಾಟ ನಡೆಸಿದ್ದರು.
ಅಲ್ಲದೆ, ಬಿ.ಎಸ್ ಯಡಿಯೂರಪ್ಪ ಅವರನ್ನು ಮಹಾಸುಳ್ಳುಗಾರ ಎಂದು ಅವಹೇಳನಾಕಾರಿ ಪದಗಳಿಂದ ನಿಂದಿಸಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು, ನರಗುಂದದಲ್ಲಿ ನಡೆಯುತ್ತಿದ್ದ ಮಹಾದಾಯಿ ಹೋರಾಟ ವೇದಿಕೆಗೆ ತೆರಳಿ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘ ಮತ್ತು ಕನ್ನಡ ಸಮರ ಸೇನೆ ಸಂಘಟನೆಗಳು ಮಹಾದಾಯಿ ಕುರಿತ ರೈತ ಹೋರಾಟವನ್ನು ಬೆಂಬಲಿಸಿ ಹೋರಾಟ ವೇದಿಕೆಯಲ್ಲಿ ಧರಣಿ ಕುಳಿತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಾತಿನ ಚಕಮಕಿ ಎಲ್ಲೆ ಮೇರಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಯಾಗಿಸಬೇಕಾಯ್ತು.