15 ವರ್ಷದಿಂದ ಹೊಟ್ಟೆಯೊಳಗೆ ಬೆಳೆದ ಬೃಹತ್ ಗಡ್ಡೆ, ವೃದ್ಧನ ನರಕಯಾತನೆ
ಗದಗ, ಆಗಸ್ಟ್ 9: ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ವ್ಯಕ್ತಿಯೊಬ್ಬರಿಗೆ ಹೊಟ್ಟೆಯ ಹೊರ ಭಾಗದಲ್ಲಿ ಬೃಹತ್ ಆಕಾರದ ಗಡ್ಡೆ ಬೆಳೆದಿದ್ದು, ಕಳೆದ 15 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಹನುಮಂತಪ್ಪ ಎಂಬ ವೃದ್ಧ ಈ ವಿಚಿತ್ರ ರೋಗಕ್ಕೆ ತುತ್ತಾಗಿದ್ದು, ಯಾರಾದರೂ ನೆರವಿಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಬುಲ್ಡೊಜರ್ ನಗರ ನಿವಾಸಿ 69 ವರ್ಷದ ಹನುಮಂತಪ್ಪರಿಗೆ ಹೊಟ್ಟೆಯಿಂದ ಬೃಹತ್ ಗಡ್ಡೆ ಆಕಾರ ಹೊರಬಂದಿದ್ದು, ವೃದ್ಧ ನಿತ್ಯ ನರಕ ಅನುಭವಿಸುವಂತಾಗಿದೆ. ಹೊಟ್ಟೆಯೊಳಗಿಂದ ಗಡ್ಡೆ ಜೋತು ಬಿದ್ದಿದೆ. ಆದರೆ ಅದರಿಂದ ಅವರಿಗೆ ಯಾವುದೇ ನೋವು ಆಗುತ್ತಿಲ್ಲ. ಆದರೆ ಓಡಾಡೋದು ಮಾತ್ರ ತುಂಬಾ ಕಷ್ಟವಾಗಿದೆ.
Tattoo ಹಾಕಿಸಿಕೊಂಡವರಿಗೆ HIV ರೋಗ ಸಂಪೂರ್ಣ ಉಚಿತ!?
ಹನುಮಂತಪ್ಪನಿಗೆ ಮಕ್ಕಳಿಲ್ಲ, ಜೀವನ ನಡೆಸಲು ಹನಮಂತಪ್ಪನಿಗೆ ಹೆಂಡತಿಯೇ ಆಧಾರವಾಗಿದ್ದಾರೆ. ಇಳಿವಯಸ್ಸಿನಲ್ಲಿ ದುಡಿಮೆಯೂ ಸಾಧ್ಯವಾಗ್ತಿಲ್ಲ, ಸರಕಾರ ನೀಡುವ ಅಕ್ಕಿಯಿಂದ ಜೀವನ ನಸುತ್ತಿದ್ದಾರೆ. ಆಸ್ಪತ್ರೆಗೆ ಹೋದರೆ ಎಷ್ಟು ಹಣ ಬೇಕಾಗಬಹುದೋ ಎಂದು ಚಿಕಿತ್ಸೆ ಗೊಡವಿಗೆ ಹನಮಂತಪ್ಪ ಹೋಗಿಲ್ಲ. ಮಕ್ಕಳ ಮನರಂಜನೆಯ 'ಗರ್ದಿ ಗಮ್ಮತ್ತು' (ಬಯೋಸ್ಕೋಪ್) ನಡೆಸುತ್ತಿದ್ದ ಹನುಮಂತಪ್ಪ, ವಿಚಿತ್ರ ರೋಗದ ಸಮಸ್ಯೆಯಿಂದ ಸದ್ಯ ಮನೆಯಲ್ಲೇ ಕೈದಿಯಾಗಿ ಜೀವನ ನಡೆಸುವಂತಾಗಿದೆ.
ಅನಾರೋಗ್ಯ ಹನುಮಂತಪ್ಪನನ್ನು ಮನೆಯಿಂದ ಹೆಚ್ಚು ಓಡಾಡೋದಕ್ಕೆ ಬಿಡುತ್ತಿಲ್ಲ. ಹೀಗಿದ್ರೂ ಎರಡು ಕಿಲೋ ಮೀಟರ್ ಓಡಾಡುತ್ತಾರಂತೆ. ಗರ್ದಿ ಗಮ್ಮತ್ತು ಆಟ ನಿಂತು 15 ವರ್ಷ ಆಗಿದೆ. ಅದರಿಂದ ಬರುತ್ತಿದ್ದ ಬಿಡಿಗಾಸು ನಿಂತು ಹೋಗಿದೆ. ಈ ನಿಗೂಢ ರೋಗ ಆವರಿಸಿತ್ತೋ ಆಗಿನಿಂದ ಹನುಮಂತಪ್ಪ ಮನೆಯಲ್ಲಿದ್ದಾರೆ. ಚಿಕ್ಕಂದಿನಿಂದಲೇ ಹೊಟ್ಟೆ ಅಸಹಜ ಆಕಾರದಲ್ಲಿತ್ತು, ನಂತರ ವಯಸ್ಸು ಆದಂತೆಲ್ಲ, ಹೊಟ್ಟೆ ಬೆಳೀತಿದೆ. ಹೊಟ್ಟೆ ಕರಳು ಸಮಸ್ಯೆ ಅಂತಾ ಕೆಲ ವೈದ್ಯರು ಹೇಳಿದ್ದರಂತೆ. ವರ್ಷದಿಂದ ಗಡ್ಡೆ ಬೆಳೆದು ವೃದ್ಧ ಹನಮಂತಪ್ಪ ಹಾಸಿಗೆ ಹಿಡಿಯುವಂತಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಹಣಕಾಸಿನ ತೊಂದರೆಯಿಂದ ಆಸ್ಪತ್ರೆಗೆ ಹೋಗದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸರಕಾರ ಇತ್ತ ಗಮನ ಹರಿಸಿ ವೃದ್ಧನ ಸಹಾಯಕ್ಕೆ ಧಾವಿಸಬೇಕಿದೆ. ಸೂಕ್ತ ಚಿಕಿತ್ಸೆಗೆ ನೆರವು ನೀಡಬೇಕಿದೆ. ಅಲೆಮಾರಿ ಜನಾಂಗದ ಹನುಮಂತಪ್ಪನ ನಿತ್ಯ ನರಕಯಾತನೆಗೆ ಮುಕ್ತ ಕೊಡಬೇಕೆಂದರು ಆತನ ಪರಿಸ್ಥಿತಿ ನೋಡಿದವರು ಆಶಯ ವ್ಯಕ್ತಪಡಿಸಿದ್ದಾರೆ