ಗದಗ್ ನಲ್ಲಿ ವ್ಯಕ್ತಿಯ ಸಾವಿನವರೆಗೂ ಗೊತ್ತಾಗಲಿಲ್ಲ ಕೊರೊನಾ ವೈರಸ್!
ಗದಗ, ಜೂನ್,03: ಕೊರೊನಾ ವೈರಸ್ ಸೋಂಕು ಯಾವಾಗ, ಯಾರಿಗೆ, ಹೇಗೆ, ಯಾವ ರೀತಿಯಲ್ಲಿ ಅಂಟಿಕೊಳ್ಳುತ್ತೆ ಎನ್ನುವುದನ್ನೇ ಊಹಿಸಲು ಆಗುತ್ತಿಲ್ಲ. ಕರ್ನಾಟಕದ ಮಟ್ಟಿಗೆ ದಿನೇ ದಿನೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ.
ಬುಧವಾರ ಗದಗ್ ನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಲಕ್ಕುಂಡಿ ಗ್ರಾಮದ 44 ವರ್ಷದ ಪುರುಷನು ಮೃತಪಟ್ಟ ನಂತರದಲ್ಲಿ ಆತನಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ ಒಂದೇ ದಿನ 388 ಕೊವಿಡ್-19 ಕೇಸ್!
ಕಳೆದ ಮೇ.27ರಂದು ಮದುಮೇಹ ಮತ್ತು ಮೂತ್ರಕೋಶ ಸಮಸ್ಯೆಯಿಂದ 44 ವರ್ಷದ ವ್ಯಕ್ತಿಯೊಬ್ಬರು ಗದಗ ಸಿಎಸ್ಐ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯತೆ ಹಿನ್ನೆಲೆ ಜೂನ್.1ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಪಷ್ಟನೆ:
ಕಳೆದ ಜೂನ್.01ರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಬುಧವಾರ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ರಕ್ತ ಹಾಗೂ ಗಂಟಲು ಮಾದರಿಯನ್ನು ಈ ಮೊದಲೇ ಕೊರೊನಾ ವೈರಸ್ ಸೋಂಕು ತಪಾಸಣೆಗೆ ರವಾನಿಸಲಾಗಿತ್ತು. ಆದರೆ, ವ್ಯಕ್ತಿ ಮೃತಪಟ್ಟ ಬಳಿಕ ಆತನಲ್ಲಿ ಸೋಂಕು ತಗಲಿರುವುದು ದೃಢಪಟ್ಟಿರುವ ಬಗ್ಗೆ ಸ್ಪಷ್ಟವಾಗಿದೆ. ಈ ಬಗ್ಗೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಇದುವರೆಗೂ 35 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದರೆ, ಒಬ್ಬ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. 17 ಮಂದಿ ಗುಣಮುಖರಾಗಿದ್ದರೆ, 17 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.