ಭಾರತದ ಹೆಮ್ಮೆ ಹೇಳಿ, ಉಗ್ರವಾದವನ್ನು ಖಂಡಿಸಿದ ಸುಷ್ಮಾರಿಂದ ಅದ್ಭುತ ಭಾಷಣ
ಅಬುಧಾಬಿ, ಮಾರ್ಚ್ 1: ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ)ನ ಸದಸ್ಯರು ವಿಶ್ವಸಂಸ್ಥೆಯ ನಾಲ್ಕನೇ ಭಾಗದಷ್ಟು ಮತ್ತು ಬಹುತೇಕ ಮಾನವೀಯತೆಯ ಕಾಲು ಭಾಗದಷ್ಟಿದ್ದಾರೆ. ಭಾರತವು ನಿಮ್ಮ ಜತೆ ಬಹಳ ಹಂಚಿಕೊಂಡಿದೆ. ನಮ್ಮಲ್ಲಿ ಹಲವರು ವಸಾಹತುಶಾಹಿಯ ಕರಾಳ ದಿನಗಳನ್ನು ಹಂಚಿಕೊಂಡಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಒಐಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಅದ್ಭುತವಾದ ಧರ್ಮ ಹಾಗೂ ಪ್ರಾಚೀನ ನಾಗರಿಕತೆಯ ದೇಶಗಳಿಂದ ಬಂದಿರುವ ನಿಮ್ಮ ಜತೆಗೆ ನಾನೂ ಇಲ್ಲಿರುವುದು ನನಗೆ ಗೌರವ. ಜ್ಞಾನದ ಶಿಖರ, ಶಾಂತಿಯ ದ್ಯೋತಕ, ನಂಬಿಕ ಹಾಗೂ ಸಂಪ್ರದಾಯದ ಮೂಲ ಹಾಗೂ ಹಲವು ಧರ್ಮಗಳ ತವರು ಮನೆ ಹಾಗೂ ಪ್ರಮುಖ ಆರ್ಥಿಕತೆಗಳಲ್ಲಿ ಒಂದು ಎನಿಸಿರುವ ದೇಶದ ಪರವಾಗಿ ನಾನಿಲ್ಲಿ ನಿಂತಿದ್ದೇನೆ ಎಂದಿದ್ದಾರೆ ಸುಷ್ಮಾ.
ಸುಷ್ಮಾ ಸ್ವರಾಜ್ ಭಾಗವಹಿಸಿದ್ದಕ್ಕೆ, OIC ಸಭೆ ಬಹಿಷ್ಕರಿಸಿದ ಪಾಕಿಸ್ತಾನ
ನಮ್ಮಲ್ಲಿ ಹಲವರು ಸ್ವಾತಂತ್ರ್ಯದ ಬೆಳಕು ಕಂಡಿದ್ದೇವೆ. ಅದೇ ಸಮಯಕ್ಕೆ ಭರವಸೆಯ ಕಿರಣವನ್ನು ಕಂಡಿದ್ದೇವೆ. ನಮ್ಮ ಸ್ವಾಭಿಮಾನ ಹಾಗೂ ಗೌರವದ ಸಲುವಾಗಿ ಎಲ್ಲರೂ ಒಟ್ಟಿಗೆ ನಿಂತಿದ್ದೇವೆ. ಭಯೋತ್ಪಾದನೆಯು ಬದುಕನ್ನು ನಾಶಗೊಳಿಸುತ್ತಿದೆ. ಪ್ರಾದೇಶಿಕ ಅಸ್ಥಿರತೆಯನ್ನು ತರುತ್ತಿದೆ. ಇಡೀ ಜಗತ್ತನ್ನೇ ಆತಂಕಕ್ಕೆ ಒಡ್ಡಿದೆ. ಭಯೋತ್ಪಾದನೆ ವ್ಯಾಪಿಸುತ್ತಿದೆ, ಹೆಚ್ಚುತ್ತಿದೆ, ಬೆಳೆಯುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ನೂರಾ ಮೂವತ್ತು ಕೋಟಿ ಜನರ ಹಾರೈಕೆ
ಪ್ರಧಾನಿ ನರೇಂದ್ರ್ ಮೋದಿ ಹಾಗೂ ನೂರಾ ಮೂವತ್ತು ಕೋಟಿ ಭಾರತೀಯರು, ಅದರಲ್ಲಿ ಹದಿನೆಂಟೂವರೆ ಕೋಟಿ ಮುಸ್ಲಿಂ ಸೋದರ-ಸೋದರಿಯರ ಹಾರೈಕೆಗಳನ್ನು ನಾನು ತೆಗೆದುಕೊಂಡು ಬಂದಿದ್ದೇನೆ. ವಿವಿಧತೆಯಿಂದ ಕೂಡಿರುವ ಭಾರತದಲ್ಲಿ ನಮ್ಮ ಮುಸ್ಲಿಮ್ ಸೋದರ-ಸೋದರಿಯರು ಉತ್ತಮ ಸಂಖ್ಯೆಯಲ್ಲಿ ಇದ್ದಾರೆ. ಭಾರತದಲ್ಲಿ ಮುಸ್ಲಿಮರು ತಮ್ಮ ಧರ್ಮಾಚರಣೆ ಮಾಡುತ್ತಾ, ಮುಸ್ಲಿಮೇತರರ ಜತೆಗೆ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ. ವಿವಿಧತೆ, ಸಹಜೀವನಕ್ಕೆ ಸಂಬಂಧಿಸಿದ ಮೆಚ್ಚುಗೆಯ ಮಾತುಗಳಿವು. ಆದರೆ ಕೆಲವು ಮುಸ್ಲಿಮರು ವಿಷಯುಕ್ತ ಮೂಲಭೂತವಾದ ಸಿದ್ಧಾಂತಗಳ ಬಲಿಪಶುಗಳಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಋಗ್ವೇದದ ಪ್ರಸ್ತಾವ ಮಾಡಿದ ಸಚಿವೆ ಸುಷ್ಮಾ
ಭಯೋತ್ಪಾದನೆಯ ಪ್ರತಿ ಪ್ರಕರಣಗಳನ್ನು ಗಮನಿಸಿ, ಧರ್ಮದ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿರುವುದು ಕಂಡುಬರುತ್ತದೆ. ಭಯೋತ್ಪಾದನೆ ವಿರುದ್ಧ ಹೋರಾಟ ಅಂದರೆ ಅದು ಯಾವುದೇ ಧರ್ಮದ ವಿರುದ್ಧ ಅಲ್ಲ. ಇಸ್ಲಾಮ್ ಅಂದರೆ ಶಾಂತಿ. ಅಲ್ಲಾಹ್ ನ ತೊಂಬತ್ತೊಂಬತ್ತು ಹೆಸರಿನ ಪೈಕಿ ಯಾವುದೇ ಹಿಂಸೆ ಎಂಬ ಅರ್ಥ ನೀಡುವುದಿಲ್ಲ. ಅದೇ ರೀತಿ ಎಲ್ಲ ಧರ್ಮಗಳು ಶಾಂತಿಗಾಗಿಯೇ ಇವೆ. ಭಾರತಕ್ಕೆ ಬಹುತ್ವದಲ್ಲಿ ನಂಬಿಕೆ ಇದೆ. ಈ ಬಗ್ಗೆ ಋಗ್ವೇದದಲ್ಲಿ ಇರುವ ಏಕಂ ಸತ್ ವಿಪ್ರ ಬಹುದಾ ವದಂತಿ ಎಂಬಂತೆ, ಅಂದರೆ ದೇವರು ಒಬ್ಬನೆ. ಆದರೆ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಬಣ್ಣಿಸುತ್ತಾರೆ ಎಂಬ ಮಾತಿನಲ್ಲಿ ನಮಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಚೀನಾ ಮುಂದೆ ಪಾಕಿಸ್ತಾನಕ್ಕೆ ತಪರಾಕಿ ಬಾರಿಸಿದ ಸುಷ್ಮಾ ಸ್ವರಾಜ್!
ಎಲ್ಲ ಪ್ರಾರ್ಥನೆ ಶಾಂತಿ ಅಂತಲೇ ಕೊನೆ
ಮಹಾತ್ಮಗಾಂಧಿ ಅವರ ಭೂಮಿಯಿಂದ ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮಲ್ಲಿ ಎಲ್ಲ ಪ್ರಾರ್ಥನೆಗಳು ಶಾಂತಿ ಅಂತಲೇ ಕೊನೆಯಾಗುತ್ತದೆ. ಹಾಗೆಂದರೆ ಎಲ್ಲರಿಗೂ ಶಾಂತಿ ಸಿಗಲಿ ಎಂದರ್ಥ. ಸ್ಥಿರತೆ, ಶಾಂತಿ, ಸೌಹಾರ್ದತೆ, ಆರ್ಥಿಕ ಪ್ರಗತಿ ಮತ್ತು ಶ್ರೀಮಂತಿಕೆಯನ್ನು ನಿಮ್ಮ ಜನರಿಗೆ ಹಾಗೂ ಜಗತ್ತಿಗೆ ನಾನು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಉಗ್ರರಿಗೆ ನೆಲೆ, ಹಣಕಾಸು ನೆರವು ನಿಲ್ಲಿಸಬೇಕು
ನಾವು ಮಾನವೀಯತೆಯನ್ನು ರಕ್ಷಿಸಿಕೊಳ್ಳಬೇಕು ಅಂದರೆ, ಯಾವ ದೇಶವು ಭಯೋತ್ಪಾದಕರಿಗೆ ನೆಲೆ, ಹಣಕಾಸು ಒದಗಿಸುತ್ತಿದೆಯೋ ಅವುಗಳಿಗೆ ಉಗ್ರರ ನೆಲೆಯ ಮೂಲಸೌಕರ್ಯ ಧ್ವಂಸಗೊಳಿಸಲು ಹಾಗೂ ಆಯಾ ದೇಶದಲ್ಲಿ ಇರುವ ಉಗ್ರ ಸಂಘಟನೆಗಳಿಗೆ ನೆಲೆ ಹಾಗೂ ಹಣಕಾಸು ಒದಗಿಸುವುದನ್ನು ನಿಲ್ಲಿಸಲು ಹೇಳಬೇಕಿದೆ ಎಂದು ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.