ರಿಯಾದ್ ನಲ್ಲಿ ಭಾರತದ $ 5 ಟ್ರಿಲಿಯನ್ ಕನಸಿನ ಸಾಕಾರದ ಹಾದಿ ತೆರೆದಿಟ್ಟ ಮೋದಿ
ರಿಯಾದ್, ಅಕ್ಟೋಬರ್ 30: "ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆ ದುಪ್ಪಟ್ಟುಗೊಳಿಸುವ, ಅಂದರೆ ಐದು ಟ್ರಿಲಿಯನ್ ಅಮೆರಿಕನ್ ಡಾಲರ್ ಗುರಿ ಇರಿಸಿಕೊಳ್ಳಲಾಗಿದೆ. ಭಾರತವು ಅಭಿವೃದ್ಧಿಗೆ ವೇಗ ನೀಡಬೇಕು ಅಂದರೆ ಬೆಳವಣಿಗೆಯ ಟ್ರೆಂಡ್ ಅರ್ಥ ಮಾಡಿಕೊಳ್ಳಬೇಕು" ಎಂದು ಪ್ರಧಾನಿ ಮೋದಿ ಅವರು ರಿಯಾದ್ ನಲ್ಲಿ ಮಂಗಳವಾರ ನಡೆದ ಫ್ಯೂಚರ್ ಇನ್ವೆಸ್ಟ್ ಮೆಂಟ್ ಇನಿಷಿಯೇಟಿವ್ ನಲ್ಲಿ(ಎಫ್ ಐಐ) ಅಭಿಪ್ರಾಯ ಪಟ್ಟಿದ್ದಾರೆ.
ಈ ವೇದಿಕೆಯ ಉದ್ದೇಶ ಕೇವಲ ಆರ್ಥಿಕತೆ ಬಗ್ಗೆ ಚರ್ಚಿಸುವುದಲ್ಲ. ಜತೆಗೆ ಜಾಗತಿಕವಾಗಿ ಮುಂಬರುವ ಟ್ರೆಂಡ್ ಕೂಡ ಅರ್ಥ ಮಾಡಿಕೊಳ್ಳುವುದು ಸಹ ಆಗಿದೆ. ಅದರಲ್ಲಿ ವಿಶ್ವದ ಒಳಿತಿದೆ ಎಂದು ಮೋದಿ ಹೇಳಿದ್ದಾರೆ.
ತಾಂತ್ರಿಕತೆಯ ಪರಿಣಾಮ, ಮೂಲಸೌಕರ್ಯದ ಪ್ರಾಮುಖ್ಯ, ಮಾನವ ಸಂಪನ್ಮೂಲ, ಪರಿಸರ ಕಾಳಜಿ ಹಾಗೂ ಉದ್ಯಮಸ್ನೇಹಿ ಆಡಳಿತ ಹೀಗೆ ಭವಿಷ್ಯದ ಸಮೃದ್ಧಿಗೆ ಐದು ಮುಖ್ಯ ಟ್ರೆಂಡ್ಸ್ ಗಳನ್ನು ಮೋದಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಪ್ರಯಾಣಿಸುವ ವಿಮಾನಕ್ಕೆ ಪಾಕಿಸ್ತಾನದೊಳಗೆ ಎಂಟ್ರಿ ಇಲ್ಲ!
ಎಪ್ ಐಐ ಫೋರಂ ಬಹಳ ದೀರ್ಘವಾದ ಹಾದಿ ಸವೆಸಿದೆ. ಇಲ್ಲಿನ ಜನರ ಪರಿಶ್ರಮದ ಫಲವಾಗಿ ಮರಳು ಚಿನ್ನವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
"ನಮ್ಮ ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಪ್ರಾಚೀನ ನಂಟು ಭದ್ರ ಬುನಾದಿ ಹಾಕಿಕೊಟ್ಟಿದೆ" ಎಂದು ಸೌದಿ ಅರೇಬಿಯಾ ಹಾಗೂ ಭಾರತದ ಮಧ್ಯದ ಸಂಬಂಧವನ್ನು ಮೋದಿ ಬಣ್ಣಿಸಿದ್ದಾರೆ.
"ಮೂಲಸೌಕರ್ಯವು ವ್ಯಾಪಾರದ ಹೂಡಿಕೆಗೆ ದೊಡ್ಡ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ವ್ಯಾಪಾರದ ಪ್ರಗತಿ ಹಾಗೂ ಇತರ ಮೂಲಸೌಕರ್ಯಗಳು ಅಗತ್ಯ" ಎಂದಿದ್ದಾರೆ.
ಇಂದು ಭಾರತವು ಸ್ಟಾರ್ಟ್ ಅಪ್ ಗಳ ಪಾಲಿಗೆ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಉತ್ತಮ ವಾತಾವರಣ ಸೃಷ್ಟಿಸಿದೆ. ಭಾರತದ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಕೂಡ ಸ್ಟಾರ್ಟ್ ಅಪ್ ಗಳು ತಲೆ ಎತ್ತುತ್ತಿವೆ. ನಮ್ಮ ಸ್ಟಾರ್ಟ್ ಅಪ್ ಗಳು ಜಾಗತಿಕ ಮಟ್ಟದಲ್ಲಿ ಹೂಡಿಕೆ ಆರಂಭಿಸಿವೆ. ನಮ್ಮಲ್ಲಿನ ಸ್ಟಾರ್ಟ್ ಅಪ್ ವಾತಾವರಣದಿಂದ ಅನುಕೂಲ ಪಡೆಯಲು ಬನ್ನಿ ಎಂದು ಜಾಗತಿಕ ಮಟ್ಟದ ಹೂಡಿಕೆದಾರರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ ಮೋದಿ.
ಮೋದಿಯನ್ನು ಹಾಡಿ ಹೊಗಳಿದ ನೊಬೆಲ್ ಪುರಸ್ಕೃತ ಅಭಿಜಿತ್
"ಮುಂದಿನ ಐದು ವರ್ಷದೊಳಗೆ ರಿಫೈನಿಂಗ್, ಪೈಪ್ ಲೈನ್ಸ್, ಗ್ಯಾಸ್ ಟರ್ಮಿನಲ್ಸ್ ಗಾಗಿ ನೂರು ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಗುರಿ ಇರಿಸಿಕೊಂಡಿದ್ದೇವೆ. ಸೌದಿ ಅರಾಮ್ಕೋ ಕಂಪೆನಿಯು ವೆಸ್ಟ್ ಕೋಸ್ಟ್ ರಿಫೈನರಿ ಯೋಜನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿರುವುದು ಸಂತಸ ತಂದಿದೆ. ಅದು ಏಷ್ಯಾದಲ್ಲೇ ಅತಿ ದೊಡ್ಡ ರಿಫೈನರಿ ಆಗಲಿದೆ ಎಂದು ಮೋದಿ ತಿಳಿಸಿದ್ದಾರೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಸ್ಕಿಲ್ ಇಂಡಿಯಾ ಅಡಿಯಲ್ಲಿ ನಲವತ್ತು ಕೋಟಿ ಜನರಿಗೆ ವಿವಿಧ ಕೌಶಲ ತರಬೇತಿ ನೀಡಲಾಗುವುದು. ಭಾರತದಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ ಕೌಶಲಯುಕ್ತ ಮಾನವ ಸಂಪನ್ಮೂಲ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
"ನಮ್ಮ ನೀತಿಗಳ ಸ್ಪಷ್ಟತೆ ಇದೆ. ಎಲ್ಲ ಭಾರತೀಯರ ಜೀವನ ಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿ. ರಾಜಕೀಯ ಸ್ಥಿರತೆ ಮತ್ತು ವೈವಿಧ್ಯ ಮಾರುಕಟ್ಟೆ ಕಾರಣಕ್ಕೆ ಭಾರತದಿಂದ ನಿಮಗೆ ಲಾಭವಾಗಲಿದೆ. ಸೌದಿಯ ವಿಷನ್ 2030 ಮತ್ತು ಆರ್ಥಿಕತೆಯಲ್ಲಿ ವೈವಿಧ್ಯ ತರಲು ನಾವು ಬೆಂಬಲಿಸುತ್ತೇವೆ" ಎಂದು ಮೋದಿ ತಿಳಿಸಿದ್ದಾರೆ.