ಕೇರಳದ ಚಿನ್ನ ಸ್ಮಗಲಿಂಗ್: ದುಬೈನಲ್ಲಿ ಆರೋಪಿ ಫೈಜಲ್ ಬಂಧನ
ದುಬೈ, ಜುಲೈ 19: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಫೈಜಲ್ ಫರೀದ್ ನನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಫರೀದ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಇಂಟರ್ ಪೋಲ್ ಸಂಸ್ಥೆಗೂ ವಾರೆಂಟ್ ಪ್ರತಿ ಕಳಿಸಲಾಗಿತ್ತು.
ಮತ್ತಿಬ್ಬರು ಆರೋಪಿಗಳಾದ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರನ್ನು 14 ದಿನಗಳ ಕಾಲ ರಾಷ್ಟ್ರೀಯ ತನಿಖಾ ತಂಡ ( ಎನ್ಐಎ) ಕಸ್ಟಡಿಗೆ ನೀಡಲಾಗಿದೆ. ಇಬ್ಬರನ್ನು ತಿರುವನಂತಪುರಂಗೆ ಕರೆದೊಯ್ದ ಎನ್ಐಎ ಅಧಿಕಾರಿಗಳು 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಚಿನ್ನದ ಸ್ಮಗಲಿಂಗ್ ಜೊತೆ ಸ್ವಪ್ನ ಸುರೇಶ್ ಮೇಲೆ ಮತ್ತೊಂದು ಕೇಸ್
ಈ ಪ್ರಕರಣದಲ್ಲಿ ಸರಿತ್ ಪಿಎಸ್ ಮೊದಲ ಆರೋಪಿ(ಎ1) ಆಗಿದ್ದರೆ, ಸ್ವಪ್ನ ಸುರೇಶ್(ಎ2), ನಾಪತ್ತೆಯಾಗಿರುವ ಫಜೀಲ್ ಫರೀದ್(ಎ3) ಹಾಗೂ ಸಂದೀಪ್ ನಾಯರ್ (ಎ4) ಉಳಿದ ಆರೋಪಿಗಳಾಗಿದ್ದಾರೆ.
ಎನ್ಐಎ ಕಸ್ಟಡಿಗೆ ಸ್ವಪ್ನ ಸುರೇಶ್: ಕೋರಮಂಗಲದಿಂದ ಕೊಚ್ಚಿ ತನಕ
ಈಗಾಗಲೇ ರಾಯಭಾರ ಕಚೇರಿಯಿಂದ ಯುಎಇ ಸರ್ಕಾರಕ್ಕೆ ಈ ಪ್ರಕರಣದ ಬಗ್ಗೆ ತಿಳಿಸಲಾಗಿತ್ತು. ಆರೋಪಿ ಫರೀದ್ ಪಾಸ್ ಪೋರ್ಟ್ ತಡೆ ಹಿಡಿಯಲಾಗಿದೆ.
ಭಾರತಕ್ಕೆ ಶೀಘ್ರದಲ್ಲೇ ರವಾನೆ ಸಾಧ್ಯತೆ
ಆರೋಪಿ ಫರೀದ್ ನನ್ನು ದುಬೈನ ಅಲ್ ರಶೀದಿಯಾ ಪೊಲೀಸ್ ಠಾಣೆಯಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. 36 ವರ್ಷ ವಯಸ್ಸಿನ ಫರೀದ್ ತ್ರಿಸ್ಸೂರಿನ ಕೊಡಂಗಲ್ಲೂರ್ ಮೂಲದವನು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಆತನ ಮನೆ ಮೇಲೆ ದಾಳಿ ನಡೆಸಲಾಗಿತ್ತು. ದುಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್, ಆಟೋಮೊಬೈಲ್ ವರ್ಕ್ ಶಾಪ್ ಹೊಂದಿದ್ದಾನೆ. ಸ್ಮಗಲಿಂಗ್ ಹಣವನ್ನು ಅಂತಾರಾಷ್ಟ್ರೀಯ ಮಟ್ಟದ ಉಗ್ರ ಜಾಲಕ್ಕೆ ಹಣ ರವಾನೆ ಮಾಡಿದ ಆರೋಪವನ್ನು ಫರೀದ್ ಹೊತ್ತುಕೊಂಡಿದ್ದಾನೆ. ಈ ಕುರಿತಂತೆ ಎನ್ಐಎ ಅಗತ್ಯ ದಾಖಲೆಗಳನ್ನು ಒದಗಿಸಿ, ಶೀಘ್ರದಲ್ಲೇ ಆತನನ್ನು ಕೇರಳಕ್ಕೆ ಕರೆಸಿಕೊಳ್ಳುವ ಸಾಧ್ಯತೆಯಿದೆ.
ದುಬೈನಲ್ಲಿ ಖರೀದಿ, ಸಂದೀಪ್ ಸಾಗಾಣೆ ಜವಾಬ್ದಾರಿ
ದುಬೈನಲ್ಲಿ ಚಿನ್ನವನ್ನು ಖರೀದಿಸಿದ ಫರೀದ್ ಅದನ್ನು ಸಂದೀಪ್ ನಾಯರ್ ಮೂಲಕ ಹವಾಲಾ ಮಾರ್ಗವಾಗಿ ಬೇಕಾದವರಿಗೆ ತಲುಪಿಸುವ ಜಾಲವನ್ನು ರೂಪಿಸಿದ್ದ ಎಂದು ತಿಳಿದು ಬಂದಿದೆ. ಜೂನ್ 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣ ರವಾನೆ, ಸಾಗಣೆಯಲ್ಲಿ ನೆರವಾಗಲು ಸ್ಥಳೀಯ ಗ್ಯಾಂಗ್ ಸ್ಟರ್ ಗಳ ನೆರವು ಪಡೆದಿರುವ ಶಂಕೆ ಕೂಡಾ ಇದೆ.
ಯುಎಇ ಕಾನ್ಸುಲೇಟ್ ಮಾಜಿ ಪಿಆರ್ ಒ ಸರೀತ್
ಸ್ವಪ್ನ ಪ್ರಭ ಸುರೇಶ್, ಫಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಮೊದಲಿಗೆ ಬಂಧನವಾಗಿದ್ದು, ಆತನ ಮೂಲಕವೇ ಸ್ವಪ್ನ ಈ ಕೇಸಿನಲ್ಲಿರುವುದು ಪತ್ತೆಯಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜೊತೆ ಸ್ವಪ್ನ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
30 ಕೆಜಿ ಚಿನ್ನ ತಲುಪಬೇಕಾದ ವಿಳಾಸ
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ರಶೀದ್ ಖಾಮಿಸ್ ಅಲ್ ಶಾಮೆಲಿ, ಯುಎಇ ಅಧಿಕಾರಿ ಹೆಸರಿಗೆ ಈ ಬ್ಯಾಗೇಜ್ ತಲುಪಬೇಕಿತ್ತು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ. ಯುಎಇ ರಾಯಭಾರ ಕಚೇರಿ ಕೂಡಾ ಈ ಪ್ರಕರಣದ ಆಂತರಿಕ ತನಿಖೆ ನಡೆಸಿದೆ.
ನಕಲಿ ದಾಖಲೆ ಹೊಂದಿದ್ದ ಸ್ವಪ್ನ ಸುರೇಶ್
ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಸ್ವಪ್ನ ಆನ್ ಲೈನ್ ಮೂಲಕ ಜಾಮೀನು ಅರ್ಜಿ ಹಾಕಿದ್ದರು. ಆದರೆ, ಪ್ರಕರಣಾವು ಯುಎಪಿಎ ಕಾಯ್ದೆ 1967 ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಎನ್ಐಎ ನ್ಯಾಯಾಲವು ಜಾಮೀನು ಅರ್ಜಿ ತಿರಸ್ಕರಿಸಿ, ಎನ್ಐಎ ಕಸ್ಟಡಿಗೆ ನೀಡಿದೆ. ಈ ನಡುವೆ ಸಿಎಂ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಿವಶಂಕರ್ ಅಮಾನತಾಗಿದ್ದಾರೆ. ಅವರ ವಿಚಾರಣೆಯನ್ನು ಕಸ್ಟಡಿ ಅಧಿಕಾರಿಗಳು ನಡೆಸಿದ್ದಾರೆ. ಸ್ವಪ್ನ ಸ್ವರೇಶ್ ಐಟಿ ಸಲಹೆಗಾರ್ತಿ ಹುದ್ದೆಯನ್ನು ಅಕ್ರಮವಾಗಿ ಪಡೆಯಲು ಶಿವಶಂಕರ್ ನೆರವು ನೀಡಿದ್ದರು ಎಂಬುದು ಈಗ ಸಾಬೀತಾಗಿದೆ. ನಕಲಿ ದಾಖಲೆ ನೀಡಿ ಗುತ್ತಿಗೆ ಆಧಾರಿತ ಕೆಲಸ ಪಡೆದ ಸ್ವಪ್ನ ಮೇಲೆ ಮತ್ತೊಂದು ಕೇಸ್ ಕೂಡಾ ಬಿದ್ದಿದೆ.