ದುಬೈ ಶೇಖ್ ನಿಧನಕ್ಕೆ ಕರ್ನಾಟಕ ಸರ್ಕಾರದಿಂದ ಒಂದು ದಿನ ಶೋಕಾಚರಣೆ
ಬೆಂಗಳೂರು, ಮೇ 14: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ, ಮೇ 13 ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಶನಿವಾರ (ಮೇ 14) ಒಂದು ದಿನ ಶೋಕಾಚರಣೆ ಆಚರಿಸಲು ಆದೇಶ ಹೊರಡಿಸಿದೆ.
ಮೇ 13ರಂದು ನಿಧನರಾಗಿದ್ದ ಶೇಖ್ ಅವರ ಗೌರವಾರ್ಥವಾಗಿ ಭಾರತ ಸರ್ಕಾರದಿಂದ ಕೂಡ ಒಂದು ದಿನ ಶೋಕಾಚರಣೆಯನ್ನು ಆಚರಿಸಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದಿಂದಲೂ ಸಹ ಶೋಕಾಚರಣೆ ಆಚರಿಸಲು ಆದೇಶ ಮಾಡಿದೆ. ಗಣ್ಯರ ಗೌರವಾರ್ಥ ಜಾರಿಯಲ್ಲಿರುವ ಶೋಕಾಚರಣೆಯಲ್ಲಿ ರಾಜ್ಯದಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಅಲ್ಲದೆ, ನಿಯತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
"ಯುಎಇ ಅಧ್ಯಕ್ಷರಾದ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ಬಗ್ಗೆ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಯುಎಇ, ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರ ಮತ್ತು ಪ್ರಪಂಚದ ಜನರೊಂದಿಗೆ ಸಂತಾಪ ವ್ಯಕ್ತಪಡಿಸುತ್ತದೆ" ಎಂದು ತಿಳಿಸಲಾಗಿತ್ತು.
ಶೇಖ್ ಖಲೀಫಾ ಅವರು ಯುಎಇ ಅಧ್ಯಕ್ಷರಾಗಿ ಮತ್ತು ಅಬುಧಾಬಿಯ ಆಡಳಿತಗಾರರಾಗಿ ನವೆಂಬರ್ 3, 2004 ರಿಂದ ಸೇವೆ ಸಲ್ಲಿಸಿದರು. ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕಾಗಿ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.
Recommended Video
ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್, ಅವರು 1971 ರಲ್ಲಿ ಒಕ್ಕೂಟದಿಂದ ಯುಎಇಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2004ರ ನವೆಂಬರ್ 2 ರಂದು ನಿಧನರಾಗಿದ್ದರು. ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಸಚಿವಾಲಯಗಳು, ಇಲಾಖೆಗಳು, ಫೆಡರಲ್ ಮತ್ತು ಸ್ಥಳೀಯ ಸಂಸ್ಥೆಗಳು ಇಂದಿನಿಂದ ಕೆಲಸವನ್ನು ಸ್ಥಗಿತಗೊಳಿಸುತ್ತವೆ ಎನ್ನಲಾಗಿದೆ.