ಎರಡು ಮಾವಿನಹಣ್ಣು ಕದ್ದಿದ್ದ ಭಾರತೀಯ ನೌಕರ ದುಬೈನಿಂದ ಗಡೀಪಾರು
ದುಬೈ, ಸೆಪ್ಟೆಂಬರ್ 24: ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯನೊಬ್ಬನನ್ನು ಎರಡು ಮಾವಿನ ಹಣ್ಣು ಕದ್ದ ಕಾರಣಕ್ಕೆ ಗಡೀಪಾರು ಮಾಡಿ, ಯುನೈಟೆಡ್ ಅರಬ್ ಎಮಿರೇಟ್ಸ್ ಕೋರ್ಟ್ ಆದೇಶ ನೀಡಿದೆ. ಕಳೆದ ವರ್ಷ ಪ್ರಯಾಣಿಕರೊಬ್ಬರ ಬ್ಯಾಗೇಜ್ ನಿಂದ ಎರಡು ಮಾವಿನ ಹಣ್ಣು ಕದ್ದ ಆರೋಪ ಈತನ ಮೇಲೆ ನಿಗದಿ ಆಗಿದೆ.
ಸೋಮವಾರದಂದು ಕೋರ್ಟ್ ಆದೇಶ ಹೊರಬಿದ್ದಿದೆ. ಇಪ್ಪತ್ತೇಳು ವರ್ಷದ ಭಾರತೀಯ ನೌಕರನಿಗೆ ಐದು ಸಾವಿರ ದಿರ್ಹಾಮ್ ದಂಡ ವಿಧಿಸಲಾಗಿದ್ದು, ಆ ನಂತರ ಗಡೀಪಾರಿಗೆ ಆದೇಶ ನೀಡಿದೆ. ಎರಡು ವರ್ಷಗಳ ಹಿಂದೆ ಆರು ದಿರ್ಹಾಮ್ ಮೌಲ್ಯದ ಎರಡು ಮಾವಿನ ಹಣ್ಣನ್ನು ಆತ ಕದ್ದಿದ್ದ.
ಮಾವಿನ ಹಣ್ಣಿನ ತೂಕ 450 ಗ್ರಾಂ: ಇದರ ಹೆಸರು 'ಮೋದಿ ಮಾವು'!
ಹಣ್ಣಿನ ಬಾಕ್ಸ್ ನಲ್ಲಿ ಇದ್ದ ಮಾವಿನ ಹಣ್ಣುಗಳನ್ನು ಕದ್ದಿದ್ದಾಗಿ ನೌಕರ ಒಪ್ಪಿಕೊಂಡಿದ್ದಾನೆ. ಆ ಹಣ್ಣುಗಳನ್ನು ಭಾರತಕ್ಕೆ ಸಾಗಿಸಲಾಗುತ್ತಿತ್ತು. ತನಗೆ ವಿಪರೀತ ಬಾಯಾರಿಕೆ ಆಗಿತ್ತು. ನೀರಿಗಾಗಿ ಹುಡುಕಾಡಿದೆ. ಆ ಮೇಲೆ ಹಣ್ಣನ್ನು ಬಾಕ್ಸ್ ನಿಂದ ತೆಗೆದುಕೊಂಡೆ ಎಂದು ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಭದ್ರತಾ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ, ಪ್ರಯಾಣಿಕರ ಲಗೇಜ್ ಬ್ಯಾಗ್ ತೆಗೆದು, ಕಳ್ಳತನ ಮಾಡುವುದು ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಹದಿನೈದು ದಿನ ಅವಕಾಶ ಇದೆ.