ಆರ್ಥಿಕ ಸಂಕಷ್ಟದಿಂದ ಯುಎಇಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಭಾರತೀಯ
ದುಬೈ, ಡಿಸೆಂಬರ್ 10: ಯುಎಇಯ ಅಪಾರ್ಟ್ ಮೆಂಟ್ ವೊಂದರಲ್ಲಿ ಭಾರತೀಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪ್ರಮುಖ ಸಾಮಾಜಿಕ ಕಾರ್ಯಕರ್ತ 35 ವರ್ಷದ ಸಂದೀಪ್ ವೆಳ್ಳಲೂರ್ ರಾಸ್ ಅಲ್ ಖೈಮಾ (ಆರ್ ಎಕೆ) ಎಮಿರೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.
ಟ್ರಾನ್ಸ್ ಪೋರ್ಟ್ ಕಂಪನಿಯೊಂದನ್ನು ಸ್ವಂತವಾಗಿ ಆರಂಭಿಸಿದ ಮೇಲೆ ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಖಲೀಜ್ ಟೈಮ್ಸ್ ನಲ್ಲಿ ವರದಿ ಆಗಿದೆ. ಮೂರು ಮಕ್ಕಳ ತಂದೆಯಾದ ಸಂದೀಪ್, ಯುಎಇಯಲ್ಲಿ ಪ್ರಮುಖ ಸಾಮಾಜಿಕ ಕಾರ್ಯಕರ್ತ. ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಅವರ ಜತೆಗೆ ಕೋಣೆಯಲ್ಲಿ ವಾಸವಿದ್ದವರು ಹೊರಗೆ ಹೋಗಿದ್ದರು ಎಂದು ತಿಳಿದುಬಂದಿದೆ.
ಬೇಹುಗಾರಿಕೆ ಆರೋಪ; ಬ್ರಿಟಿಷ್ ವಿದ್ಯಾರ್ಥಿಗೆ ಯುಎಇಯಲ್ಲಿ ಜೀವಾವಧಿ ಜೈಲು
ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸಂದೀಪ್ ಜತೆಗೆ ವಾಸವಿದ್ದವರು ಕೆಲಸ ಮುಗಿಸಲು ವಾಪಸ್ ಬಂದ ಮೇಲೆ ಬಾಗಿಲು ಒಳಗಿಂದ ಹಾಕಿಕೊಂಡಿರುವುದು ಗೊತ್ತಾಗಿದೆ. ಆ ನಂತರ ಬಾಗಿಲು ಒಡೆದು ಒಳಕ್ಕೆ ಹೋಗಿದ್ದಾರೆ. ಆಗ ಸಂದೀಪ್ ಛಾವಣಿಗೆ ನೇಣು ಬಿಗಿದುಕೊಂಡಿರುವುದು ಕಂಡು ದಿಗ್ಭ್ರಮೆಗೆ ಒಳಗಾಗಿದ್ದಾರೆ.
ಯುಲಾನ್ ಕಲಾ ಸಾಹಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಫ್ರೆಂಡ್ಸ್ ಕ್ರಿಕೆಟ್ ಅಸೋಸಿಯೇಷನ್ ಟೀಮ್ ಲೀಡರ್ ಆಗಿದ್ದರು ಸಂದೀಪ್. ಆರ್ ಎಕೆನಲ್ಲಿ ಆಗಾಗ ರಕ್ತ ದಾನ ಶಿಬಿರ ಆಯೋಜಿಸುತ್ತಿದ್ದರು. ಅವರ ಕಾರ್ಯವನ್ನು ಶ್ಲಾಘಿಸಿ ಆರೋಗ್ಯ ಸಚಿವಾಲಯದಿಂದ ಗೌರವ ಮಾಡಲಾಗಿತ್ತು.
ವರ್ಷದ ಹಿಂದೆ ಭಾರತೀಯ ನೌಕರರೊಬ್ಬರಿಗೆ ಅಪಘಾತವಾದಾಗ ನಾಲ್ಕು ಲಕ್ಷ ರುಪಾಯಿ ಸಹಾಯ ಮಾಡಿದ್ದರು ಸಂದೀಪ್. ಇದಕ್ಕೂ ಮುನ್ನ ಕುಟುಂಬದವರ ಜತೆಗೆ ವಾಸವಿದ್ದ ಅವರು, ಮೂರು ವರ್ಷದ ಹಿಂದೆ ಭಾರತಕ್ಕೆ ಕಳುಹಿಸಿ, ಸದ್ಯಕ್ಕೆ ಇಬ್ಬರು ಸ್ನೇಹಿತರ ಜತೆಗೂಡಿ ವಿಲ್ಲಾವೊಂದರಲ್ಲಿ ವಾಸವಿದ್ದರು.