ಪಾಕಿಸ್ತಾನದ ಬಡ ಜಿಲ್ಲೆಯಲ್ಲಿ ಭಾರತೀಯ ಮೂಲದ ಉದ್ಯಮಿ ದಾನ-ಧರ್ಮ
ದುಬೈ, ಜೂನ್ 6: ದುಬೈ ಮೂಲದ ಭಾರತೀಯ ಉದ್ಯಮಿಯೊಬ್ಬರು ಬಡತನದಿಂದ ಬಳಲುತ್ತಿರುವ ಪಾಕಿಸ್ತಾನದ ಆಗ್ನೇಯ ಸಿಂಧ್ ಪ್ರಾಂತ್ಯದ ಜಿಲ್ಲೆಯಲ್ಲಿ ಅರವತ್ತು ಹ್ಯಾಂಡ್ ಪಂಪ್ ಗಳನ್ನು ಅಳವಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೋಗಿಂದರ್ ಸಿಂಗ್ ಸಲಾರಿಯಾ ಅವರು ಥರ್ಪಕರ್ ಜಿಲ್ಲೆಯಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಅರವತ್ತೆರಡು ವಾಟರ್ ಪಂಪ್ ಅಳವಡಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಅವರಿಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಗೊತ್ತಾದ ಮೇಲೆ ಚೀಲಗಳಲ್ಲಿ ಧಾನ್ಯಗಳನ್ನು ಸಹ ಕಳುಹಿಸಿದ್ದಾರೆ. ಸಲಾರಿಯಾ 1993ರಿಂದ ಯುಎಇಯಲ್ಲಿ ಇದ್ದಾರೆ. ಟ್ರಾನ್ಸ್ ಪೋರ್ಟ್ ವ್ಯವಹಾರವನ್ನು ಮಾಡುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದಲ್ಲಿರುವ ಸಾಮಾಜಿಕ ಕಾರ್ಯಕರ್ತರನ್ನು ತಲುಪಿ, ಇಡೀ ಚಟುವಟಿಕೆಗೆ ಹಣಕಾಸು ನೆರವು ನೀಡಿದ್ದಾಗಿ ಹೇಳಿದ್ದಾರೆ.
ಮುಸ್ಲಿಮ್ ಕಾರ್ಮಿಕರಿಗಾಗಿ ಯುಎಇಯಲ್ಲಿ ಮಸೀದಿ ನಿರ್ಮಿಸಿದ ಭಾರತೀಯ ಕ್ರಿಶ್ಚಿಯನ್ ಚೆರಿಯನ್
ಪುಲ್ವಾಮಾ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಪರಿಸ್ಥಿತಿ ಹದಗೆಟ್ಟಿದೆ. ನಾವು ಈ ಬಡ ಹಳ್ಳಿಗಳಲ್ಲಿ ಹ್ಯಾಂಡ್ ಪಂಪ್ ಗಳನ್ನು ಅಳವಡಿಸುತ್ತಿದ್ದೇವೆ ಎಂದು ಜೋಗಿಂದರ್ ಹೇಳಿದ್ದಾರೆ. ಅವರು ಪೆಹಲ್ ಚಾರಿಟಬಲ್ ಟ್ರಸ್ಟ್ ಎಂಬುದನ್ನು ಮಾಡಿಕೊಂಡು ನೆರವಾಗುತ್ತಿದ್ದಾರೆ.
ಇಡೀ ಯೋಜನೆಯಲ್ಲಿ ಜೋಗಿಂದರ್ ಜತೆಗೆ ಪಾಕಿಸ್ತಾನದಿಂದ ಸಮನ್ವಯ ಸಾಧಿಸಿರುವಂಥವರು ಭೀಲ್ ಖಂಗರ್. "ಹಳ್ಳಿಯಲ್ಲಿ ಕೆಲವೇ ರಸ್ತೆಗಳು ಇದ್ದವು. ಹತ್ತಿರದ ಆಸ್ಪತ್ರೆ ಅಂದರೆ ಐವತ್ತು ಕಿ.ಮೀ. ದೂರದಲ್ಲಿತ್ತು. ಮುಖ್ಯ ರಸ್ತೆ ತಲುಪುವುದಕ್ಕೆ ಜನರು ಇಪ್ಪತ್ತೈದು ಕಿ.ಮೀ. ನಡೆದು ಹೋಗಬೇಕಿತ್ತು. ಆ ಪ್ರದೇಶಗಳಲ್ಲಿ ಶಾಲೆಗಳು ಸಹ ಬಹಳ ಕೆಟ್ಟ ಸ್ಥಿತಿಯಲ್ಲಿ ಇರುತ್ತವೆ. ಏಕೆಂದರೆ ಶಾಲೆಯನ್ನು ತಲುಪಲು ರಸ್ತೆ ವ್ಯವಸ್ಥೆಯೇ ಇಲ್ಲ" ಎನ್ನುತ್ತಾರೆ.
ವರದಿಯೊಂದರ ಪ್ರಕಾರ, ಸಿಂಧ್ ಪ್ರಾಂತ್ಯದಲ್ಲಿನ ಬಡತನದ ಪ್ರಮಾಣ ಶೇಕಡಾ ಎಂಬತ್ತೇಳರಷ್ಟು. ಕಳೆದ ಒಂದು ದಶಕದಲ್ಲಿ ಇಲ್ಲಿನ ಅಭಾವ ಬೆಳೆಯುತ್ತಲೇ ಹೋಗಿ ಬಡತನಕ್ಕೂ ನಾನಾ ಆಯಾಮಗಳು ಬಂದವು ಎಂದು ವರದಿಯಲ್ಲಿ ಹೇಳಲಾಗಿದೆ.