ದುಬೈನಲ್ಲಿ ಅದ್ಧೂರಿಯಾಗಿ 65 ನೇ ಕನ್ನಡ ರಾಜ್ಯೋತ್ಸವ ಆಚರಣೆ
ದುಬೈ,ನವೆಂಬರ್ 15: ದೂರದ ದುಬೈ ಕನ್ನಡಿಗರ ವತಿಯಿಂದ ೬೪ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಳ ಅದ್ಧೂಯಾಗಿ ನೆರವೇರಿಸಲಾಯಿತು. ನವೆಂಬರ್ ೦೮ ರಂದು ಇಲ್ಲಿನ ನಾದಲ್ ಶೀಬಾದ್ ನಲ್ಲಿರುವ ಹಾರ್ಟ್ ಲ್ಯಾಂಡ್ ಅಂತರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ಸಂಜೆ ೦೫ ಗಂಟೆಗೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭಾರತೀಯ ದುಬೈ ರಾಯಭಾರಿ ಕೇಂದ್ರದ ಕಾನ್ಸುಲರ್ ವಿಪುಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡದಲ್ಲೇ ಶುಭ ಕೋರಿದ್ದು ವಿಶೇಷವಾಗಿತ್ತು. ದುಬೈ ಕನ್ನಡಿಗರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಪಾಲ್ಗೊಂಡು 'ಕನ್ನಡ ರತ್ನ' ಪ್ರಶಸ್ತಿ ಸ್ವೀಕರಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮತ್ತು ಮುಖ್ಯ ಭಾಷಣಕಾರರಾಗಿ ದುಬೈ ಕನ್ನಡಿಗರನ್ನುದ್ದೇಶಿಸಿ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯವರೆಗೂ ಪಾಲ್ಗೊಂಡು ದುಬೈ ಕನ್ನಡಿಗರಿಗೆ ಖುಷಿ ನೀಡಿದರು.
ದುಬೈ ಕನ್ನಡಿಗರ ಜೊತೆ ಸುಧಾಮೂರ್ತಿ ರಾಜ್ಯೋತ್ಸವ ಆಚರಣೆ
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ತನ್ನ ಒಂದು ಕಾಲಿನ ಸ್ಥಿರತೆಯನ್ನು ಕಳೆದುಕೊಂಡಿರುವ ಹೆಮ್ಮೆಯ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಪಾಲ್ಗೊಂಡು ಕಾರ್ಗಿಲ್ ಯುದ್ಧದ ಸಂದರ್ಭವನ್ನು ವಿವರಿಸಿದ್ದು, ಕಾರ್ಯಕ್ರಮದಲ್ಲಿ ನೆರೆದವರನ್ನು ರೋಮಾಂಚನಗೊಳಿಸಿತು. ಅವರಿಗೆ ದುಬೈ ಕನ್ನಡಿಗರು 'ವೀರ ಯೋಧ' ಪಶಸ್ತಿಯನ್ನು ನೀಡಿ ಗೌರವಿಸಿದರು.
ಈ ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಭಾಗವಹಿಸಿದ್ದರಲ್ಲದೇ ಕಲಾವಿದರು ಹಾಡು, ನೃತ್ಯ ಸೇರಿದಂತೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದುದ್ದಕ್ಕೂ ಹಳದಿ,ಕೆಂಪು ಬಾವುಟ ಹಾರಾಡಿ, ಎಲ್ಲರ ಬಾಯಲ್ಲಿ ಕನ್ನಡ ಜಯಘೋಷ ಮೊಳಗಿತು. ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದ ಆರ್ಜೆ.ಸಿರಿ ಅಚ್ಚು ಕಟ್ಟಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆದರು.