ಹರ್ಷದ್ ಕ್ಯಾಮೆರಾ ಕಣ್ಣಲ್ಲಿ ಕನಸಿನ ಬಣ್ಣಗಳು...
ಧಾರವಾಡ, ಜೂನ್ 17: ಕ್ಯಾಮೆರಾ ಹಿಡಿದವರೆಲ್ಲಾ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಆದರೆ ಒಮ್ಮೆ ಕ್ಯಾಮೆರಾ ಮೋಹಕ್ಕೆ ಒಳಗಾದರೆಂದರೆ ಅದರಿಂದ ತಪ್ಪಿಸಿಕೊಳ್ಳುವುದೂ ಸುಲಭವಲ್ಲ. ಹೀಗೆ ಕ್ಯಾಮೆರಾದೊಂದಿಗೆ ಅತೀವ ನಂಟು ಬೆಳೆಸಿಕೊಂಡವರೇ ಹರ್ಷದ್ ಉದಯ್ ಕಾಮತ್.
ಫೋಟೊಗ್ರಫಿಯನ್ನು ಪ್ರೀತಿಸಿ, ಅದರಲ್ಲಿ ಏನಾದರೂ ಸಾಧಿಸಬೇಕೆಂಬ ದಾರಿಯಲ್ಲಿ ಸಾಗುತ್ತಿರುವ 28ರ ಹರೆಯದ ಯುವಕ ಹರ್ಷದ್ ಊರು ಕುಮಟಾ. ಧಾರವಾಡದ ಎಸ್ ಡಿಎಂ ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿದ್ದಾರೆ. ಅಣ್ಣ ದೀಪಕ್ ತೆಗೆಯುವ ಛಾಯಾಚಿತ್ರಗಳಿಂದ ಆಕರ್ಷಿತರಾಗಿ ಅಪ್ಪನಲ್ಲಿ ಹಠ ಹಿಡಿದು ಕ್ಯಾಮೆರಾ ಖರೀದಿ ಮಾಡಿದ ಅವರು ಕಾಲೇಜು ದಿನಗಳಿಂದಲೂ ಫೋಟೊ ತೆಗೆಯುವ ಹವ್ಯಾಸ ಬೆಳೆಸಿಕೊಂಡವರು. ಕತ್ತಲು ಬೆಳಕಿನ ಆಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದೆಂದರೆ ಇವರಿಗೆ ಬಲು ಪ್ರೀತಿ. ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಹಾಗೂ ಜೀನೇಶ್ ಪ್ರಸಾದ್, ಶಾಜ್ ಝಂಗ್ ಅವರ ಪ್ರಭಾವದಿಂದ ಕ್ಯಾಮೆರಾ ಇನ್ನಷ್ಟು ಸೆಳೆದಿದ್ದಾಗಿ ಹೇಳಿಕೊಳ್ಳುತ್ತಾರೆ.
ಕ್ಯಾಮೆರಾ ಹಿಂದಿನ ಕಣ್ಣು ಶಿಡ್ಲಘಟ್ಟದ ಮಲ್ಲಿಕಾರ್ಜುನ ಜತೆ ಮಾತುಕತೆ
ವಿದ್ಯೆಯಲ್ಲಿ ಮುಂಚೂಣಿಯಲ್ಲಿದ್ದ ಹರ್ಷದ್ ಗೆ ಎಂಬಿಎ ಮುಗಿದ ಬಳಿಕ ಕೈತುಂಬಾ ಸಂಬಳ ನೀಡುವ ಅನೇಕ ಕೆಲಸಗಳು ಅರಸಿ ಬಂದವು. ಹಾಗೆಯೇ ಎರಡು ವರ್ಷಗಳ ಕಾಲ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದರು. ಇದರೊಂದಿಗೆ ಫೋಟೊಗ್ರಫಿ ಹವ್ಯಾಸವೂ ಸಾಗಿತ್ತು.
ಆದರೆ ಇದು ನನ್ನ ವೃತ್ತಿಯಲ್ಲ, ಬೇರೇನಾದರೂ ಸಾಧಿಸೋಣವೆಂದು ಕೆಲಸಕ್ಕೆ ಗುಡ್ ಬೈ ಹೇಳಿ ತಾನೇ ಒಂದು ಸಂಸ್ಥೆಯನ್ನು ತೆರೆದರು. ಅದೇ ಯುವ ಆರ್ಟ್. ಫೋಟೊಗ್ರಫಿ ಮಾತ್ರ ಸಾಲದು. ಇಲ್ಲಿದ್ದುಕೊಂಡೇ ಏನಾದರೂ ಸಾಧಿಸಬೇಕೆಂಬ ತುಡಿತವೂ ಅವರಲ್ಲಿತ್ತು. ಹಾಗಾಗಿ ತಮಗೆ ಫೋಟೊಗ್ರಫಿ ಬಗ್ಗೆ ತಿಳಿದಿರುವುದನ್ನು ಇತರರಿಗೆ ತಿಳಿಸಲು ಉಚಿತ ಕಾರ್ಯಾಗಾರಗಳನ್ನು ನಡೆಸಲು ಮುಂದಾದರು. ಇವರ ಕಾರ್ಯಕ್ಕೆ ಮತ್ತಷ್ಟು ಸ್ನೇಹಿತರು ಕೈಜೋಡಿಸಿದರು.
ಯುವ ಆರ್ಟ್ ಸಂಸ್ಥೆಯಲ್ಲಿ ಕೆಲವು ಯುವಕರೊಂದಿಗೆ, ಹಲವು ಶೈಲಿಯ ಫೋಟೊಗ್ರಫಿಯ ಪರಿಕಲ್ಪನೆಯನ್ನು ಆರಂಭಿಸಿದರು. ಆಸಕ್ತಿಯಿದ್ದೂ, ಕಲಿಯಲು ಅವಕಾಶವಿಲ್ಲದ ಯುವಕರಿಗೆ ಫೋಟೊಗ್ರಫಿ ಕಾರ್ಯಾಗಾರಗಳನ್ನು ಉಚಿತವಾಗಿ ನಡೆಸಿಕೊಟ್ಟರು. ಇದುವರೆಗೂ ಅಂತಹ 500ಕ್ಕೂ ಹೆಚ್ಚು ಜನರು ಉಚಿತ ಕಾರ್ಯಾಗಾರದ ಫಲ ಕಂಡಿದ್ದಾರೆ.
ವಿಶ್ವ ಛಾಯಾಚಿತ್ರ ದಿನ: ಮನಸೆಳೆವ ಆ 10 ಚಿತ್ರಗಳು
'ನನಗೆ ಭಾವನಾತ್ಮಕ ಚಿತ್ರಗಳನ್ನು ತೆಗೆಯಬೇಕೆಂಬ ಆಸೆಯಿದೆ. ಅದರಲ್ಲೂ ಮದುವೆ ವೇಳೆ ಹೆಣ್ಣಿನ ಭಾವನೆಯನ್ನು ಸೆರೆಹಿಡಿಯುವುದು ಬಲು ಇಷ್ಟ. ಯಾವಾಗಲೂ ಬೇರೆಯವರ ಫೋಟೊಗಳನ್ನು ನೋಡಿ ನಾನೇನು ಹೊಸದಾಗಿ ಕಲಿಯಬಹುದೆಂದು ತಡಕಾಡುತ್ತೇನೆ. ಇತ್ತೀಚೆಗೆ ಫೋಟೊಗ್ರಫಿಯಲ್ಲಿ ಕೆಲ ವಿಭಿನ್ನ ಪ್ರಯತ್ನಗಳನ್ನು ಮಾಡಿದ್ದೇನೆ. ಅವೆಲ್ಲವೂ ಖುಷಿ ಕೊಟ್ಟಿದೆ' ಎಂದು ಹೇಳಿಕೊಳ್ಳುತ್ತಾರೆ ಹರ್ಷದ್.
ವರ್ಷದ ಹಿಂದೆ, ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ತಮ್ಮ ಸಂಸ್ಥೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿನೂತನ ಅಭಿಯಾನ ಶುರುಮಾಡಿ 1 ಲಕ್ಷ ಮೊತ್ತದ ಸಹಾಯವನ್ನು ಮಾಡಿದ್ದರು. ಅನೇಕ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಂಡಿರುವ ಹರ್ಷದ್, ಮುಂದಿನ ದಿನಗಳಲ್ಲಿ ಎನ್ ಜಿ ಓ ಸ್ಥಾಪಿಸಿ ಉತ್ತರ ಕರ್ನಾಟಕದ ಗ್ರಾಮಾಂತರ ಭಾಗದ ಯುವಕರಿಗೆ ಉಚಿತವಾಗಿ ಫೋಟೊಗ್ರಫಿ ಹೇಳಿಕೊಡುವ ಆಸೆ ಇಟ್ಟುಕೊಂಡಿದ್ದಾರೆ.
ಯಾವ ಕ್ಯಾಮೆರಾ ಖರೀದಿಸಬೇಕು ಎಂಬುದರಿಂದ ಬಾಡಿಗೆ ಕ್ಯಾಮೆರಾವರೆಗೆ
ಶಿವಮೊಗ್ಗ, ಧಾರವಾಡದಲ್ಲಿ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ನಡೆಸಿದ್ದರು, ಅಂತರಾಷ್ಟ್ರೀಯ ಸ್ಫರ್ಧೆಯಲ್ಲಿ ಅಂತಿಮ ಸ್ಪರ್ಧಿಯಾಗಿ ಆಯ್ಕೆಯಾಗಿದ್ದು ಹರ್ಷದ್, ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಇವರು ಕ್ಲಿಕ್ಕಿಸಿದ್ದ ವೀರೇಂದ್ರ ಹೆಗ್ಗಡೆ ಅವರ ಛಾಯಾಚಿತ್ರ ರಾಷ್ಟ್ರದಾದ್ಯಂತ ಪ್ರಶಂಸೆಗೆ ಪಾತ್ರವಾಗಿತ್ತು. ತನ್ನ ಈ ಹವ್ಯಾಸಕ್ಕೆ ಪೋಷಕರಾದ ಉದಯ್ ಕಾಮತ್, ದೀಪಾ ಕಾಮತ್ ಹಾಗೂ ಅಣ್ಣ ದೀಪಕ್, ಸ್ನೇಹಿತರು ಸಾಥ್ ಕೊಟ್ಟವರು ಎನ್ನುತ್ತಾರೆ.