ಅಣ್ಣಿಗೇರಿಯ ಸಹಕಾರಿ ಸಂಘದಲ್ಲಿ ಅವಗಢ: ಕೆಲಸಕ್ಕೆ ಬಂದಿದ್ದ ಮಹಿಳೆ ದುರ್ಮರಣ!
ಬೆಂಗಳೂರು, ಜ. 10: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಸಹಕಾರಿ ಸಂಘಕ್ಕೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ದುರ್ಮರಣಕ್ಕೀಡಾದ ಘಟನೆ ಸಂಭವಿಸಿದೆ. ಅಣ್ಣಿಗೇರಿ ಪಟ್ಟಣದ ಸಹಕಾರಿ ಸಂಘದ ಹತ್ತಿ ಗೋಡೌನ್ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ್ದಾರೆ. ಮೃತ ಮಹಿಳೆಯನ್ನು ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದ ಸುಜಾತಾ ಹನಮಂತಪ್ಪ ಕಿರಬಣ್ಣನವರ ಎಂದು ಗುರುತಿಸಲಾಗಿದ್ದು, ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಸಹಕಾರ ಸಂಘದ ಗೋಡೌನ್ನಲ್ಲಿ ಎಂದಿನಂತೆ ಇಂದು ಕೂಡಾ ಸುಜಾತಾ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಗೋಡೆ ಬಳಿ ನಿಂತಾಗ, ಚಾಲಕ ಟ್ರ್ಯಾಕ್ಟರ್ ಹಿಂದಕ್ಕೆ ತೆಗೆದುಕೊಂಡಿದ್ದಾನೆ, ಆಗ ಆಕೆಗೆ ಟ್ರ್ಯಾಕ್ಟರ್ ಬಡಿದಿದೆ.
ಸುಜಾತಾ ಹಿಂದೆ ಗೋಡೆ ಇದ್ದ ಪರಿಣಾಮ, ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ನವಲಗುಂದ ಸರ್ಕಲ್ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಹಾಗೂ ಅಣ್ಣಿಗೇರಿ ಠಾಣೆಯ ಸಬ್ ಇನ್ಸಪೆಕ್ಟರ್ ಲಾಲಸಾಬ್ ಜೂಲಕಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.