ಮದುವೆ ಮಮತೆಯ ಕರೆಯೋಲೆಯಲ್ಲಿ ಮತದಾನದ ಜಾಗೃತಿ
ಧಾರವಾಡ, ಏಪ್ರಿಲ್ 16 : ಚುನವಣಾ ಆಯೋಗದಿಂದ ನೀಡುವ ಮತದಾರರ ಗುರುತಿನ ಚೀಟಿಯನ್ನು ಹೋಲುವಂತೆ ರಚಿಸಿರುವ ವಿವಾಹ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಸ್ಕಾಂ ನೌಕರರಾಗಿರುವ ಮಂಜುನಾಥ ಈರಪ್ಪ ಹೂಗಾರ ಹಾಗೂ ಹೆಸ್ಕಾಂನ ಇಂಜಿನಿಯರ್ ಮಹೇಶ್ ಹೂಗಾರ ಅವರ ಸಹೋದರಿ ಅನ್ನಪೂರ್ಣ ಅವರ ವಿವಾಹ ಏಪ್ರಿಲ್ 26 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಧಾರವಾಡ : ಹಾಲಿನ ಪ್ಯಾಕೆಟ್ ಮೂಲಕ ಮತದಾನದ ಜಾಗೃತಿ
ವಿವಾಹದ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆಯು ನಡೆಯುತ್ತಿದೆ. ಆದ್ದರಿಂದ, ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ಜಾಗೃತಿ ಮೂಡಿಸಲು, ಮತದಾರರ ಗುರುತಿನ ಚೀಟಿ ಮಾದರಿಯಲ್ಲಿ ಆಮಂತ್ರಣ ಪತ್ರಿಕೆ ವಿನ್ಯಾಸ ಮಾಡಿಸಿದ್ದಾರೆ.
ಚುನಾವಣೆಗಳ ಸಂದರ್ಭದಲ್ಲಿ ಬಹುತೇಕ ಜನರು ತಮ್ಮ ಮತದಾನ ಮಾಡದೇ ರಜೆ ಕಳೆಯಲು ಪ್ರವಾಸಕ್ಕೆ ಹೋಗುತ್ತಾರೆ. ಇದನ್ನು ಗಮನಿಸಿ ಜನರಿಗೆ ಅರಿವು ಮೂಡಿಸಲು ಈ ಮಾದರಿ ಆಮಂತ್ರಣ ಪತ್ರಿಕೆ ಮಾಡಿಸಿದ್ದೇವೆ ಎಂದು ಹೂಗಾರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಧಾರವಾಡಲ್ಲಿ 16,88,067 ಮತದಾರರು, ಏ.23ರಂದು ಮತದಾನ
ಮತದಾನದ ಜಾಗೃತಿ ಮಾತ್ರವಲ್ಲ ಆಮಂತ್ರಣ ಪತ್ರಿಕೆಯಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಆಮಂತ್ರಣ ಪತ್ರಿಕೆಯ ಫೋಟೋಗಳು ವೈರಲ್ ಆಗಿವೆ.
ಏಪ್ರಿಲ್ 23ರಂದು ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಅವರು ಕಣದಲ್ಲಿದ್ದಾರೆ.