ಧಾರವಾಡ ಕಾಂಗ್ರೆಸ್ ಟಿಕೆಟ್ ಗೊಂದಲ : ವಿನಯ್ ಕುಲಕರ್ಣಿ ಅಸಮಾಧಾನ
ಧಾರವಾಡ, ಏಪ್ರಿಲ್ 02 : ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಮಾತುಗಳನ್ನು ಆಡಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ವಿನಯ್ ಕುಲಕರ್ಣಿ ಅವರು, 'ನಾನು ಧಾರವಾಡ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ. ಸಿದ್ದರಾಮಯ್ಯ ಅವರ ಜೊತೆ ನಮ್ಮ ಮುಖಂಡರು ಮಾತನಾಡಿದ್ದಾರೆ' ಎಂದು ಹೇಳಿದರು.
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ
'ಟಿಕೆಟ್ ಘೋಷಣೆ ವಿಳಂಬವಾಗುತ್ತಿರುವುದರಿಂದ ಕಾರ್ಯಕರ್ತರಿಗೆ ತೀವ್ರ ಬೇಸರ ಉಂಟಾಗಿದೆ. ಏಕೆ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇಷ್ಟೊಂದು ವಿಳಂಬ ಮಾಡಿ ಟಿಕೆಟ್ ನೀಡುವುದು ಸರಿಯಲ್ಲ' ಎಂದರು.
ಧಾರವಾಡಲ್ಲಿ 16,88,067 ಮತದಾರರು, ಏ.23ರಂದು ಮತದಾನ
ಹಾಲಿ ಸಂಸದ ಬಿಜೆಪಿಯ ಪ್ರಹ್ಲಾದ್ ಜೋಶಿ ಅವರು ಈ ಬಾರಿಯ ಚುನಾವಣೆಯಲ್ಲಿಯೂ ಅಭ್ಯರ್ಥಿ. ಸತತ ಮೂರು ಬಾರಿ ಗೆದ್ದಿರುವ ಅವರು ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಅವರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ
ಧಾರವಾಡದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, 'ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಅಸಾಧ್ಯವೇನಲ್ಲ. ಈ ಹಿಂದೆ ನಾನು ಪಕ್ಷೇತರನಾಗಿ ಗೆದ್ದುಬಂದಿದ್ದೇನೆ' ಎಂದು ಹೇಳಿದರು.
ಟಿಕೆಟ್ ಘೋಷಣೆ ವಿಳಂಬ
'ಅಭ್ಯರ್ಥಿ ಘೋಷಣೆ ಮಾಡಲು ಏಕೆ ಇಷ್ಟು ವಿಳಂಬ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕಾರ್ಯಕರ್ತರು ಮಾನಸಿಕವಾಗಿ ಸಾಕಷ್ಟ ನೊಂದಿದ್ದಾರೆ. ಟಿಕೆಟ್ ವಿಳಂಬದಿಂದ ನನ್ನ ಮನಸಿಗೆ ದೊಡ್ಡ ಹಿಂಸೆಯಾಗುತ್ತಿದೆ. ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕೆ ಕ್ಷೇತ್ರದಲ್ಲಿ ಸುತ್ತಿತ್ತಿದ್ದಾರೆ' ಎಂದು ವಿನಯ್ ಕುಲಕರ್ಣಿ ಹೇಳಿದರು.
ಅಭ್ಯರ್ಥಿ ಯಾರು?
ಸೋಮವಾರ ಶಾಕಿರ್ ಸನದಿ ಧಾರವಾಡದ ಅಭ್ಯರ್ಥಿ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಆದರೆ, ಕಾಂಗ್ರೆಸ್ ಇದು ನಕಲಿ ಪತ್ರ ಅಭ್ಯರ್ಥಿ ಘೋಷಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿತು. ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನವಾಗಿದೆ.
ಕಾಂಗ್ರೆಸ್ ಕ್ಷೇತ್ರದಲ್ಲಿ ಗೆದ್ದಿಲ್ಲ
1991ರ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ನಂತರ ಕಳೆದ ಆರು ಚುನಾವಣೆಗಳಿಂದ ಬಿಜೆಪಿ ಅಭ್ಯರ್ಥಿಗಳು ಧಾರವಾಡ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಚುನಾವಣೆಯನ್ನು ಎದುರಿಸುತ್ತಿವೆ.
ಹಿಂದಿನ ಚುನಾವಣೆ ಫಲಿತಾಂಶ
ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಅವರು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಗೂ ಅವರೇ ಅಭ್ಯರ್ಥಿ. 2009ರ ಚುನಾವಣೆಯಲ್ಲಿ1,37,663 ಮತಗಳಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ1,11,657 ಮತಗಳ ಅಂತರದಲ್ಲಿ ಗೆದ್ದಿದ್ದರು.
2014ರ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ, ಪ್ರಹ್ಲಾದ್ ಜೋಶಿ ಮುಖಾಮುಖಿಯಾಗಿದ್ದರು. ಆದರೆ, ಬಾರಿ ಕಾಂಗ್ರೆಸ್ ಹುರಿಯಾಳು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.