ಧಾರವಾಡ ಕಟ್ಟಡ ದುರಂತ : 55 ಜನರ ರಕ್ಷಣೆ
ಧಾರವಾಡ, ಮಾರ್ಚ್ 20 : ಧಾರವಾಡದ ಕಟ್ಟಡ ದುರಂತದಲ್ಲಿ ಇದುವರೆಗೂ 55 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಡಿಜಿಪಿ ಎಂ.ಎನ್. ರೆಡ್ಡಿ ಹೇಳಿದರು.
ಬುಧವಾರ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ಅಂದಾಜಿನ ಪ್ರಕಾರ ಕಟ್ಟಡದ ತಳಭಾಗದಲ್ಲಿ ಇನ್ನೂ 15 ರಿಂದ 20 ಜನರು ಸಿಲುಕಿಕೊಂಡಿದ್ದಾರೆ' ಎಂದರು.
ಧಾರವಾಡ ಕಟ್ಟಡ ಕುಸಿತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
'ರಾಜ್ಯದಿಂದ ಎಸ್ಡಿಆರ್ಎಫ್ ಹಾಗೂ ಕೇಂದ್ರದಿಂದ ಎನ್ಡಿಆರ್ಎಫ್ ತಂಡವನ್ನು ಕರೆಸಲಾಗಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ವೈಜ್ಞಾನಿಕವಾಗಿ ನಡೆಯುತ್ತಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವುದು ನಮ್ಮ ಮೊದಲ ಕರ್ತವ್ಯ' ಎಂದು ಹೇಳಿದರು.
'ಎಸ್ಡಿಆರ್ಎಫ್ ನಿಂದ 45 ಜನ, ಎನ್ಡಿಆರ್ಎಫ್ ನಿಂದ 110 ಜನ ರಕ್ಷಣಾ ತಂಡ ಕಾರ್ಯಾಚರಣೆ ಮಾಡುತ್ತಿವೆ. 230 ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಕಟ್ಟಡ ಕಾರ್ಯಾಚರಣೆಯಲ್ಲಿ ಹಲವು ಸವಾಲುಗಳಿವೆ' ಎಂದರು.
ಧಾರವಾಡ ಕಟ್ಟಡ ಕುಸಿತ ದುರಂತ:ಮೃತರ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ ಘೋಷಣೆ
4 ಕಡೆ ಎಸ್ಡಿಆರ್ಎಫ್ ತುಕಡಿಗಳು : ಎನ್ಡಿಆರ್ಎಫ್ ಮಾದರಿಯಲ್ಲಿ ರಾಜ್ಯದ ಬೆಂಗಳೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ತಲಾ 100 ಜನರ ನಾಲ್ಕು ಎಸ್ಡಿಆರ್ಎಫ್ ತುಕಡಿಗಳನ್ನು ಸ್ಥಾಪಿಸಲಾಗುತ್ತಿದೆ.
ಧಾರವಾಡ ಕಟ್ಟಡ ಕುಸಿತಕ್ಕೆ ಕಳಪೆ ಕಾಮಗಾರಿಯೇ ಕಾರಣವೆಂದ ಶಾಸಕ ಪ್ರಸಾದ್ ಅಬ್ಬಯ್ಯ
ವಿಪತ್ತು ನಿರ್ವಹಣೆಯಲ್ಲಿ ಪರಿಣಿತರಾದ ಸಿಬ್ಬಂದಿ, ಅಧಿಕಾರಿಗಳು, ವೈದ್ಯರು ಈ ತುಕಡಿಗಳಲ್ಲಿ ಇರಲಿದ್ದಾರೆ. ಪ್ರಸ್ತುತ ಬೆಳಗಾವಿಯಲ್ಲಿ 42 ಹಾಗೂ ಬೆಂಗಳೂರಿನಲ್ಲಿ 45 ಜನರ ಎಸ್ಡಿಆರ್ಎಫ್ ತಂಡಗಳು ಇವೆ ಎಂದು ಹೇಳಿದರು.