ಲಾಕ್ಡೌನ್; ಮನೆಯಲ್ಲಿ ದೌರ್ಜನ್ಯ ನಡೆದರೆ ಈ ಸಹಾಯವಾಣಿಗೆ ಕರೆ ಮಾಡಿ
ಧಾರವಾಡ, ಏಪ್ರಿಲ್ 8: ಲಾಕ್ಡೌನ್ ನಿಂದ ಜನ ಮನೆಯಲ್ಲೇ ಕಾಲ ಕಳೆಯಬೇಕಾಗಿದೆ. ಹಲವರು ಇದನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಮನೆಯಲ್ಲಿ ಇರದೇ ಹೊರಗೂ ಹೋಗದೇ ಪರಿತಪಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಕೌಟುಂಬಿಕ ದೌರ್ಜನ್ಯಗಳು ನಡೆಯುತ್ತಿ ಎಂಬ ವರದಿಗಳು ಸಹ ಬಂದಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಧಾರವಾಡ ಜಿಲ್ಲಾಡಳಿತ ವಿನೂತನ ಕ್ರಮ ಕೈಗೊಂಡಿದೆ.
ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.!
ಲಾಕ್ಡೌನ್ ಘೋಷಣೆ ಸಂದರ್ಭದಲ್ಲಿ ಯಾವುದಾರೂ ಕುಟುಂಬದಲ್ಲಿ ಕೌಟುಂಬಿಕ ದೌರ್ಜನ್ಯಗಳು ನಡೆದರೆ ಉಚಿತ ಸಹಾಯವಾಣಿ ಮತ್ತು ದೂರವಾಣಿ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಲು ಧಾರವಾಡ ಜಿಲ್ಲಾಡಳಿತ ವಿನೂತನ ಕ್ರಮ ಕೈಗೊಂಡಿದೆ.
ಸಹಾಯವಾಣಿ ಸಂಖ್ಯೆ 181
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ವಹಣೆಗೊಳ್ಳುತ್ತಿರುವ ಮಹಿಳಾ ಸಹಾಯವಾಣಿ ಸಂಖ್ಯೆ 181, ದೂರವಾಣಿ ಸಂಖ್ಯೆ 0836-2445484, 0836-2747353 ಕರೆಮಾಡಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಮಹಿಳೆಯರಿಗೆ ಆಗುತ್ತಿರುವ ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ಸರ್ಕಾರ ಸತತವಾಗಿ ಪ್ರಯತ್ನ ಮುಂದುವರೆಸಿದೆ.
ಜಗದೀಶ ಶೆಟ್ಟರ್ ಚಾಲನೆ
ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾರಂಭವಾಗಿರುವ ಈ ದೂರವಾಣಿ ಆಪ್ತಸಲಹಾ ಕೇಂದ್ರಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೌಟುಂಬಿಕ ದೌರ್ಜನ್ಯ ತಡೆಗೆ ಪ್ರಾರಂಭಿಸಿರುವ ಸಾಂತ್ವನ ಸಹಾಯವಾಣಿಯ ಭಿತ್ತಿಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.
ಲಾಕ್ ಡೌನ್ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿದೆ
ಕೊರೊನಾ ತಡೆಗೆ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿದೆ. ಜಿಲ್ಲಾಡಳಿತ,ಪೊಲೀಸ್,ಆರೋಗ್ಯ,ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆ ತೃಪ್ತಿಕರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಎಲ್ಲದಕ್ಕೂ ಪೊಲೀಸರೇ ನಿರ್ಬಂಧ ಹೇರಬೇಕು ಎಂದು ಜನರು ಕಾಯಬಾರದು. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಮನೆಗಳಿಂದ ಹೊರಬರದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ.
ಧಾರವಾಡ ಕೊರೊನಾ ರೋಗಿ ಗುಣಮುಖ
ಕೋವಿಡ್19 ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡ ನಗರದ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದಿಂದ ದುಬೈ ,ಮಸ್ಕತ್ , ಪಣಜಿ ಮಾರ್ಗವಾಗಿ ಧಾರವಾಡ ಶಹರಕ್ಕೆ ಮಾ.12 ರಂದು ಆಗಮಿಸಿದ್ದ ಈ ವ್ಯಕ್ತಿ ರೋಗಲಕ್ಷಣ ಕಂಡು ಬಂದಿದ್ದರಿಂದ ಮಾ.17 ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾ.18 ರಿಂದ 21 ರವರೆಗೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.