ಧಾರವಾಡ; ತೋಟದಿಂದ ಚಿರತೆ ಪರಾರಿ, ಸೆರೆ ಸಿಕ್ಕಿದೆ ಎಂಬ ಸುದ್ದಿ ವೈರಲ್
ಹುಬಳ್ಳಿ, ಸೆಪ್ಟೆಂಬರ್ 24; ಹುಬ್ಬಳ್ಳಿ-ಧಾರವಾಡ ಜನರಲ್ಲಿ ಚಿರತೆ ಆತಂಕ ಉಂಟು ಮಾಡಿದೆ. ಗುರುವಾರ ರಾತ್ರಿ ಚಿರತೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಇರುವುದು ಪತ್ತೆಯಾಗಿದೆ. ಆದರೆ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಧಾರವಾಡ ತಾಲೂಕಿನ ಕವಲಗೇರೆಯಲ್ಲಿ ಚಿರತೆ ಇರುವುದು ಖಚಿತವಾಗಿತ್ತು. ಆದರೆ ಕ್ಷಣಕ್ಕೊಂದು ಕಡೆ ಅದು ಓಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆ ಸೆರೆ ಹಿಡಿಯಲು ಕಷ್ಟಪಡುತ್ತಿದೆ. ಹುಬ್ಬಳ್ಳಿ ನೃಪತುಂಬ ಬೆಟ್ಟದಲ್ಲಿ ಮೊದಲು ಚಿರತೆ ಕಾಣಿಸಿಕೊಂಡಿತ್ತು. ಆಗ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಹುಬ್ಬಳ್ಳಿ; ಚಿರತೆ ಪ್ರತ್ಯಕ್ಷ, ವಾಕಿಂಗ್, ಆಫ್ಲೈನ್ ಕ್ಲಾಸ್ ರದ್ದು
ಗುರುವಾರ ತಡರಾತ್ರಿ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಿರತೆ ಕಂಡು ಬಂದಿರುವ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಾಚರಣೆಯನ್ನು ಪರಿಶೀಲಿಸಿದರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಕೂಬಿಂಗ್ ಕಾರ್ಯದ ಕುರಿತು ಮಾಹಿತಿಯನ್ನು ಪಡೆದರು.
ಚಿರತೆಗೆ ಕರಿ ಚಿರತೆ ಸವಾಲು: ಕಬಿನಿಯಲ್ಲಿ ನಡೆದ ರೋಚಕ ಮುಖಾಮುಖಿಯ ವಿಡಿಯೋ
ಸೆಪ್ಟೆಂಬರ್ 20ರಂದು ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಯಿತು. ಹುಬ್ಬಳ್ಳಿಯ ಕೇಂದ್ರಿಯ ವಿದ್ಯಾಲಯ, ಧಾರವಾಡದ ಕವಲಗೇರೆ, ಕಬ್ಬೆನ್ನೂರು, ಹಾರೋಬೆಳವಡಿ ಪ್ರದೇಶದಲ್ಲಿ ಚಿರತೆ ಓಡಾಡಿದೆ ಎಂದು ಕೂಬಿಂಗ್ ನಡೆಸಲಾಯಿತು.
ಶೌಚಾಲಯದಿಂದ ಚಿರತೆ ಪರಾರಿ, ಜೀವ ಉಳಿಸಿಕೊಂಡ ನಾಯಿ!
ತೋಟದಲ್ಲಿದ್ದ ಚಿರತೆ ಪರಾರಿ
ಧಾರವಾಡ ತಾಲೂಕಿನ ಕವಲಗೇರೆಯ ಕಬ್ಬಿನ ತೋಟದಲ್ಲಿ ಚಿರತೆ ಅಡಗಿದೆ ಎಂದು ಖಚಿತಪಡಿಸಿಕೊಂಡು ಗುರುವಾರ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಲಾಯಿತು. ಆದರೆ ಚಿರತೆ ಅಲ್ಲಿಂದ ಪರಾರಿಯಾಗಿದ್ದು, ಚಿರತೆ ಹೆಜ್ಜೆಗುರುತು, ಮಲ, ಮೂತ್ರ ವಿಸರ್ಜನೆಯ ಕುರುಹು ಸಿಕ್ಕಿದೆ.
ಚಿರತೆಯನ್ನು ಹಿಡಿಯಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ, ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಬ್ಬಿನ ತೋಟದಲ್ಲಿದ್ದ ಚಿರತೆ ಸೆರೆ ಸಿಗಲಿದೆ ಎಂದೇ ಅಂದಾಜಿಸಲಾಗಿತ್ತು. ಅಷ್ಟದಲ್ಲಿ ಅದು ಪರಾರಿಯಾಗಿದೆ.
4-5 ಎಕರೆ ಪ್ರದೇಶದ ತೋಟ
ಚಿರತೆ ಹಿಡಿಯುವ ಕಾರ್ಯಾಚರಣೆ ಶುಕ್ರವಾರ ಸಹ ಮುಂದುವರೆಯಲಿದೆ. ಕಬ್ಬಿನ ತೋಟದಲ್ಲಿ ಅಡಗಿದ್ದ ಚಿರತೆ ಓಡಿಸಲು ಪಟಾಕಿ ಸಿಡಿಸಲಾಯಿತು. ಅದು ಹೊರಗೆ ಬಂದರೆ ಅರವಳಿಗೆ ಮದ್ದು ಚುಚ್ಚಲು ತಂಡ ಸಹ ಸಿದ್ಧವಾಗಿತ್ತು. ಗುರುವಾರ ರಾತ್ರಿ 11.30ರ ಸುಮಾರಿಗೆ ಚಿರತೆ ತೋಟದಿಂದ ಪರಾರಿಯಾಗಿದೆ.
ಚಿರತೆ ತಿಪ್ಪಣ್ಣ ಕವಳಿ ಹಾಗೂ ಹಂಪಣ್ಣವರ ಎಂಬುವವರ ತೋಟಕ್ಕೆ ಓಡಿದೆ. ಈ ತೋಟ ಸುಮಾರು 4-5 ಎಕರೆ ಪ್ರದೇಶದಲ್ಲಿದೆ. ಚಿರತೆ ಸೆರೆ ಹಿಡಿಯಲು7 ರಿಂದ 8 ಬೋನ್ ಸಹ ತರಲಾಗಿದೆ. ಚಿರತೆ ತೋಟದಿಂದ ಗ್ರಾಮಕ್ಕೆ ನುಗ್ಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಜಿಲ್ಲಾಧಿಕಾರಿಗಳು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, "ಶುಕ್ರವಾರದಿಂದ ಚಿರತೆ ಪತ್ತೆ ಮಾಡಿ, ಸೆರೆ ಹಿಡಿಯುವ ಕಾರ್ಯ ತೀವ್ರಗೊಳಿಸಲಾಗುವುದು. ಗ್ರಾಮಸ್ಥರು ಸಹ ಸಹಕಾರ ನೀಡಬೇಕು. ಜಿಲ್ಲಾಡಳಿತದಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಪ್ರೊಬೇಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ತಹಶೀಲ್ದಾರ್ ಡಾ. ಸಂತೋಷ ಬಿರಾದರ ಮುಂತಾದರು ಸ್ಥಳದಲ್ಲಿದ್ದರು.
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಪ್ಟೆಂಬರ್ 20ರಂದು ಚಿರತೆ ಪತ್ತೆಯಾದಾಗ ಜಿಲ್ಲಾಧಿಕಾರಿಗಳು ಜನರಿಗೆ ಮನವಿ ಮಾಡಿದ್ದರು. "ಚಿರತೆ ಪತ್ತೆ ಮಾಡಿ ಹಿಡಿಯುವ ಕಾರ್ಯ ಪ್ರಗತಿಯಲಿದ್ದು, ನೃಪತುಂಗ ಬೆಟ್ಟ, ರಾಜನಗರ ಮತ್ತು ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದ ಜನ ಸಂಜೆ ಮತ್ತು ಬೆಳಗ್ಗೆ ಎನ್. ಆರ್. ಬೆಟ್ಟಕ್ಕೆ ವಾಯುವಿಹಾರಕ್ಕೆ ಬರದಂತೆ ಮತ್ತು ರಾತ್ರಿ ಸಮಯ ಅನಗತ್ಯವಾಗಿ ಈ ಪ್ರದೇಶದಲ್ಲಿ ಸಂಚರಿಸಬಾರದು" ಎಂದು ಹೇಳಿದ್ದರು.
Recommended Video
ಸೆರೆ ಸಿಕ್ಕಿದೆ ಎಂದ ಸುಳ್ಳುಸುದ್ದಿ ವೈರಲ್
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಸೆರೆ ಸಿಕ್ಕಿದೆ ಎಂದು ಸುದ್ದಿ, ಫೋಟೋ ವೈರಲ್ ಆಗಿದೆ. ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಧಾರವಾಡ ಅರಣ್ಯ ಇಲಾಖೆ ತಂಡವು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸ್ಪಷ್ಟನೆ ನೀಡಲಾಗಿದೆ.