ಲಿಂಗಾಯತರು ಸಿಎಂ ಆಗಿದ್ದು ಜನಸಂಖ್ಯೆ ಹೆಚ್ಚಿದೆ ಅಂತಲ್ಲ, ಮನೋಭಾವದಿಂದ: ಶಂಕರ ಬಿದರಿ
ಧಾರವಾಡ, ಡಿಸೆಂಬರ್ 14: "ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ. ಈ ಕುರಿತು ಯಾವುದೇ ಭಿನ್ನಾಭಿಪ್ರಾಯ, ಗೊಂದಲ ಬೇಡ" ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಹೇಳಿದ್ದಾರೆ.
ಧಾರವಾಡ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ವೀರಶೈವರು, ಲಿಂಗಾಯತರು ಒಂದೇ. ಬೇರೆಬೇರೆ ಅಲ್ಲವೇ ಅಲ್ಲ. ಗುರು ಪರಂಪರೆ, ವಿರಕ್ತ ಪರಂಪರೆ, ಶರಣ ಪರಂಪರೆ ಅಂತ ನಮ್ಮಲ್ಲಿ ಮೂರು ಇವೆ, ಆದರೆ ಇವುಗಳಲ್ಲಿ ಬೇಧಭಾವ ಇಲ್ಲ" ಎಂದಿದ್ದಾರೆ.
"ಇಂಥ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು"
"ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಲಿಂಗಧಾರಿಗಳೆಲ್ಲ ಒಂದೇ. ವೀರಶೈವ ಲಿಂಗಾಯತದಷ್ಟು ಉದಾತ್ತ ಧರ್ಮ ಮತ್ತೊಂದಿಲ್ಲ. ದೇಶದ ಎಲ್ಲ ಪ್ರಧಾನಿಗಳು ಬಸವಣ್ಣನವರ ವಿಚಾರಗಳನ್ನೇ ಹೇಳುತ್ತ ಬಂದಿದ್ದಾರೆ. ಲಿಂಗಾಯತರು ಸಿಎಂ ಆಗಿದ್ದು ಸಮಾಜದ ಜನಸಂಖ್ಯೆ ಹೆಚ್ಚಿದೆ ಅಂತಲ್ಲ. ಅವರಲ್ಲಿ ಎಲ್ಲರನ್ನು ಒಂದೇ ಭಾವನೆಯಿಂದ ನೋಡುವಂತಹ ಮನೋಭಾವ, ಸಂಸ್ಕಾರ ಇತ್ತು. ಎಲ್ಲರಲ್ಲಿಯೂ ಸಮಪಾಲು, ಸಮಬಾಳು ಕಂಡ ನಾಯಕರಾಗಿ ಬೆಳೆದಿದ್ದಾರೆ. ಅವರು ಲಿಂಗಾಯತ ಸಮಾಜದಿಂದ ಸಿಎಂ ಆದವರ ಬಗ್ಗೆ ಇಡೀ ದೇಶದಲ್ಲಿ ಪೂಜ್ಯಭಾವ ಇದೆ" ಎಂದರು.
ಈ ವೇಳೆ ಹುಬ್ಬಳ್ಳಿ ಮೂರುಸಾವಿರ ಮಠದ ಸ್ವಾಮೀಜಿ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್ ತಿಪ್ಪಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.