ಧಾರವಾಡ; ಮುಂದುವರೆದ ಚಿರತೆ ಹಿಡಿಯುವ ಕಾರ್ಯಾಚರಣೆ
ಧಾರವಾಡ, ಸೆಪ್ಟೆಂಬರ್ 26: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ಹದ್ದೆಯ ಜಮೀನುಗಳಲ್ಲಿರುವ ಕಬ್ಬಿನ ಗದ್ದೆಗಳು ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆ ಹಚ್ಚುವ ಮತ್ತು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದವರಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಈ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದೆ ಚಿರತೆ ಕಂಡು ಬಂದಿದ್ದ ಪ್ರದೇಶದಲ್ಲಿ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಬಿಂಗ್ ಕಾರ್ಯ ಕೈಗೊಂಡರು.
ಧಾರವಾಡ; ತೋಟದಿಂದ ಚಿರತೆ ಪರಾರಿ, ಸೆರೆ ಸಿಕ್ಕಿದೆ ಎಂಬ ಸುದ್ದಿ ವೈರಲ್
ಪಕ್ಕದ ಜಮೀನುಗಳಲ್ಲಿರುವ ಕಬ್ಬಿನಗದ್ದೆಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಈ ಹೆಜ್ಜೆ ಗುರುತುಗಳು ಇವತ್ತಿನವೋ ಅಲ್ಲವೋ ಎಂದು ಪರಿಶೀಲಿಸಲಾಗುತ್ತಿದೆ ಎಂದು ಯಶಪಾಲ ಕ್ಷೀರಸಾಗರ ಹೇಳಿದ್ದಾರೆ.
ಹುಬ್ಬಳ್ಳಿ; ಚಿರತೆ ಪ್ರತ್ಯಕ್ಷ, ವಾಕಿಂಗ್, ಆಫ್ಲೈನ್ ಕ್ಲಾಸ್ ರದ್ದು
ಗುರುವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಬೇರೆ ಕಡೆ ಹೋಗಿದ್ದ ಚಿರತೆ ಮತ್ತೆ ಮರಳಿ ಇದೇ ಪ್ರದೇಶಕ್ಕೆ ಮರಳಿ ಬಂದಿರುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ
ಕಬ್ಬಿನ ಗದ್ದೆಯಿಂದ ಚಿರತೆ ಹೊರಗೆ ಓಡಿದರೂ ಸಹ ಸುತ್ತಲಿನ ಪ್ರದೇಶದ ಎಲ್ಲ ಕಡೆಗೆ ಗದ್ದಲ, ಜನದಟ್ಟಣೆ, ಬಯಲು ಪ್ರದೇಶ ಇರುವದರಿಂದ ಬಹುಶಃ, ಅದಕ್ಕೆ ಯಾವ ಕಡೆ ಹೋಗಬೇಕು ಎಂಬುದು ತಿಳಿಯದೆ ಈ ಭಾಗದಲ್ಲಿ ಕಬ್ಬು ಹೆಚ್ಚು ಇರುವದರಿಂದ ಕಬ್ಬಿನ ಗದ್ದೆಗಳಲ್ಲಿ ಸುರಕ್ಷತೆ ಬಯಸಿ ಬಂದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕೂಬಿಂಗ್ ಮೂಲಕ ಚಿರತೆ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಿಖರವಾಗಿ ಚಿರತೆ ಇರುವ ಪ್ರದೇಶ ಗುರುತಿಸಿ, ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗುತ್ತಿದೆ.
ಹುಬ್ಬಳ್ಳಿಯ ರಾಜನಗರ, ನೃಪತುಂಗ ಬೆಟ್ಟದ ಪ್ರದೇಶದಲ್ಲಿಯೂ ಚಿರತೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಅಲ್ಲಿ ಇರುವ ಬಗ್ಗೆ ಮತ್ತೇ ಯಾವುದೇ ಕುರುಹುಗಳು ಪತ್ತೆ ಆಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ಇಲಾಖೆಯ 40ಕ್ಕೂ ಹೆಚ್ಚು ಸಿಬ್ಬಂದಿ, ಅರವಳಿಕೆ ತಜ್ಞರು ಪ್ರತಿ ದಿನದಂತೆ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳು ಹಾಗೂ ಚಿರತೆ ಹೊರ ಬರಬಹುದಾದ 4-5 ಸ್ಥಳಗಳಲ್ಲಿ ತಂಡಗಳಾಗಿ ಭಾನುವಾರ ಸಹ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸೆಪ್ಟೆಂಬರ್ 20ರಂದು ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಯಿತು. ಹುಬ್ಬಳ್ಳಿಯ ಕೇಂದ್ರಿಯ ವಿದ್ಯಾಲಯ, ಧಾರವಾಡದ ಕವಲಗೇರೆ, ಕಬ್ಬೆನ್ನೂರು, ಹಾರೋಬೆಳವಡಿ ಪ್ರದೇಶದಲ್ಲಿ ಚಿರತೆ ಓಡಾಡಿದೆ ಎಂದು ಕೂಬಿಂಗ್ ನಡೆಸಲಾಯಿತು.
ಗುರುವಾರ ತಡರಾತ್ರಿ ಧಾರವಾಡ ತಾಲೂಕಿನ ಕವಲಗೇರೆಯಲ್ಲಿ ಚಿರತೆ ಇರುವುದು ಖಚಿತವಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಕಬ್ಬಿನ ಗದ್ದೆಯಲ್ಲಿ ಕಾರ್ಯಾಚರಣೆ ಆರಂಭಿಸಿದರು. ಆದರೆ ಚಿರತೆ ಕ್ಷಣಕ್ಕೊಂದು ಕಡೆ ಅದು ಓಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಿರತೆ ಕಂಡು ಬಂದಿರುವ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಾಚರಣೆಯನ್ನು ಪರಿಶೀಲಿಸಿದರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಕೂಬಿಂಗ್ ಕಾರ್ಯದ ಕುರಿತು ಮಾಹಿತಿಯನ್ನು ಪಡೆದರು. ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ತಾಲತಾಣಗಳಲ್ಲಿ ಚಿರತೆ ಸೆರೆ ಸಿಕ್ಕಿದೆ ಎಂಬ ಸುದ್ದಿ, ಫೋಟೋ ಹರಿದಾಡುತ್ತಿದೆ. ಈ ಕುರಿತು ಎಚ್ಚರ ವಹಿಸಬೇಕು ಎಂದು ಅರಣ್ಯ ಇಲಾಖೆ ಹೇಳಿದೆ. ಬಹುತೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಧಾರವಾಡದ ಅರಣ್ಯ ಇಲಾಖೆ ತಂಡವು ಚಿರತೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸುತ್ತಿದೆ. ಚಿರತೆ ಇನ್ನೂ ಸೆರೆ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
Recommended Video
ಶುಕ್ರವಾರದಿಂದ ಚಿರತೆ ಸೆರೆ ಹಿಡಿಯುವ ಕಾರ್ಯ ತೀವ್ರಗೊಳಿಸಲಾಗಿದೆ. ಗ್ರಾಮಸ್ಥರು ಸಹ ಸಹಕಾರ ನೀಡಬೇಕು. ಜಿಲ್ಲಾಡಳಿತದಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಜಿಲ್ಲಾಡಳಿತ ಗ್ರಾಮಸ್ಥರಲ್ಲಿ ಮನವಿ ಮಾಡಿದೆ.