ಧಾರವಾಡ; ಪೊಲೀಸ್ ಅಧಿಕಾರಿಯಿಂದ ಸ್ವಂತ ಖರ್ಚಲ್ಲಿ ದಿನಸಿ ವಿತರಣೆ
ಧಾರವಾಡ, ಏಪ್ರಿಲ್ 23: ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪೊಲೀಸರಿಗೆ ಈಗ ಸಿಕ್ಕಾಪಟ್ಟೆ ಕೆಲಸವಿದೆ. ಕೆಲಸದ ನಡುವೆಯೇ ಮಾನವೀಯತೆ ಮೆರೆದ ಧಾರವಾಡ ಪಿಎಸ್ಐ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಹೊಡೆಯಬೇಕು.
Recommended Video
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಆಗಿರುವ ಮಹೇಂದ್ರ ನಾಯಕ್ ಅವರ ಮಾನವೀಯ ಕಾರ್ಯಗಳಿವು. ಸುಮಾರು 2.50 ಲಕ್ಷ ಮೌಲ್ಯದ ದಿನಸಿಯನ್ನು ತಮ್ಮ ಸ್ವಂತ ಹಣದಲ್ಲಿ ತಂದು ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಅವರು ಹಂಚಿದ್ದಾರೆ.
ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿ ಮಹೇಂದ್ರ ನಾಯಕ್ ಬಡತನದಲ್ಲಿಯೇ ಬೆಳೆದು ಬಂದವರು. ಹಸಿದವರಿಗೆ, ಅಸಹಾಯಕರಿಗೆ ನಿತ್ಯ ನೆರವಾಗುವ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ಅವರಿಗೆ ಸಹಾಯವಾಗಿ ನಿಂತಿದ್ದಾರೆ.
ಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆ
ತಮ್ಮ ಠಾಣೆಯ ಸುಮಾರು 35ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್ ಪೊಲೀಸರ ಸಹಾಯದಿಂದ ಆಯಾ ಗ್ರಾಮಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಕೂಲಿ ಕಾರ್ಮಿಕರು, ಪಡಿತರ ಚೀಟಿ ಇಲ್ಲದ ಕುಟುಂಬಗಳನ್ನು ಗುರುತಿಸಿ ನೇರವಾಗಿ ಅವರ ಮನೆಗೆ ದಿನಸಿ ತಲುಪಿಸುತ್ತಿದ್ದಾರೆ.
ಮೆಚ್ಚುಗೆ ಸೂಚಿಸಿದ ಎಸ್ಪಿ
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಪಿಎಸ್ಐ ಮಹೇಂದ್ರ ನಾಯಕ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಸಹಾಯ, ಸಹಕಾರದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ, ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಅಮ್ಮಿನಭಾವಿ ಸೇರಿದಂತೆ ಸುಮಾರು 20 ಹಳ್ಳಿಯ ಅತಿ ಬಡವ ಮತ್ತು ಅಸಹಾಯಕ 300 ಕುಟುಂಬಗಳಿಗೆ ರವೆ, ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ವಿತರಣೆ ಮಾಡಲಾಗಿದೆ.
ಆಹಾರ ಧಾನ್ಯಗಳ ವಿತರಣೆ
ಧಾರವಾಡ ತಾಲೂಕಿನ 20 ಹಳ್ಳಿಗಳ 300 ಕುಟುಂಬಗಳಿಗೆ ಒಟ್ಟು 3 ಕ್ವಿಂಟಲ್ ರವೆ, 3 ಕ್ವಿಂಟಲ್ ಬೆಲ್ಲ, 5 ಕ್ವಿಂಟಲ್ ಅಕ್ಕಿ 250 ಲೀಟರ್ ಅಡುಗೆ ಎಣ್ಣೆ ಮತ್ತು ಸುಮಾರು 20 ಸಾವಿರ ಸಂತೂರ್ ಸಾಬೂನಗಳನ್ನು ಹಂಚಿದ್ದಾರೆ.
ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಹಾಯದಿಂದ ತಮ್ಮ ಸ್ವಂತ ಊರು ವಿಜಯಪುರ ತಾಲೂಕಿನ ಐನಾಪುರ ತಾಂಡ ಸೇರಿದಂತೆ ವಿಜಯಪುರ ಹಾಗೂ ಚಡಚಣ ತಾಲೂಕಿನ 15 ಹಳ್ಳಿಯ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದ್ದಾರೆ. ಪ್ರತಿ ಕಿಟ್ನಲ್ಲಿ 5 ಕೆಜಿ ರವೆ, 5 ಕೆಜಿ ಅಕ್ಕಿ ಮತ್ತು 2 ಕೆಜಿ ಬೆಲ್ಲ, ಅಡುಗೆ ಎಣ್ಣೆ, ಕಾಳು ಇವೆ.
ಇತರ ಅಧಿಕಾರಿಗಳಿಗೆ ಮಾದರಿ
ಕರ್ತವ್ಯದ ನಡುವೆಯೂ ತಮ್ಮ ಸಹಾಯಕ ಸಿಬ್ಬಂದಿಗಳ ಸಹಾಯ ಹಾಗೂ ಸಹಕಾರದಿಂದ ಅಗತ್ಯ ವಿರುವವರಿಗೆ ತಮ್ಮ ಸ್ವಂತ ಹಣದಿಂದ , ತಮ್ಮದೆ ವಾಹನದಲ್ಲಿ ದಿನಸಿ, ಆಹಾರ ಧಾನ್ಯಗಳನ್ನು ವಿತರಿಸಿಸುವ ಮೂಲಕ ಜನರ ಸೇವೆ ಮಾಡುತ್ತಿರುವ ಪಿಎಸ್ಐ ಮಹೇಂದ್ರ ನಾಯಕ್ ಇತರರಿಗೆ ಮಾದರಿಯಾಗಿದ್ದಾರೆ.
ಒಟ್ಟಾಗಿ ಕೆಲಸ, ಕೊರೊನಾ ವಿರುದ್ಧ ಹೋರಾಟ
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇತರ ಇಲಾಖೆಯ ಅಧಿಕಾರಿಗಳು ಸಹ ಅಧಿಕಾರಿಗಳಿಗೆ ಸಹಕಾರ ನೀಡುತ್ತಾ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.