ನೂತನ ಶಿಕ್ಷಣ ನೀತಿ ಅನುಷ್ಠಾನ ಸಿಸ್ಲೆಪ್ ಸಂಸ್ಥೆಗೆ ಮಹತ್ವದ ಜವಾಬ್ದಾರಿ
ಬೆಂಗಳೂರು, ಸೆ. 10: ಪ್ರಸಕ್ತ ಸಾಲಿನಿಂದ ದೇಶದಾದ್ಯಂತ ಜಾರಿಯಾಗಲಿರುವ ನೂತನ ಶಿಕ್ಷಣ ನೀತಿಯು ಹೊಸ ವಿಶ್ಲೇಷಣೆ ಸಾಮರ್ಥ್ಯ, ಚಿಂತನೆಗಳನ್ನು ಬೆಳೆಸುವ ಗುರಿ ಹೊಂದಿದೆ. ರಾಜ್ಯದಲ್ಲಿ ಈ ನೀತಿಯನ್ನು ಅನುಷ್ಠಾನಕ್ಕೆ ತರುವ ಕಾರ್ಯದಲ್ಲಿ ಧಾರವಾಡದಲ್ಲಿರುವ ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್)ಗೆ ಪ್ರಮುಖ ಜವಾಬ್ದಾರಿ ನೀಡಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶಕುಮಾರ್ ಹೇಳಿದರು.
ಧಾರವಾಡ ನಗರದ ಡಯಟ್ ಆವರಣದಲ್ಲಿ ಇರುವ ಸಿಸ್ಲೆಪ್ ಸಭಾಂಗಣಕ್ಕೆ ಇಂದು ಭೇಟಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಅವರು ಪರಿಶೀಲಿಸಿದರು.
2020 ರ ನೂತನ ಶಿಕ್ಷಣ ನೀತಿ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಸುದೀರ್ಘ ಐದು ವರ್ಷಗಳ ಕಾಲ ಆಳವಾದ ಅಧ್ಯಯನ ನಡೆಸಿ ಈ ನೀತಿ ರೂಪಿಸಿವೆ. ಹೊಸ ಚಿಂತನೆಗಳು ಮತ್ತು ಆವಿಷ್ಕಾರ ಮನೋಭಾವ ಬೆಳೆಸುವ ಆಶಯಗಳನ್ನು ಈ ನೀತಿ ಹೊಂದಿದೆ.ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಸಿಸ್ಲೆಪ್ ಸಂಸ್ಥೆಯ ಕಾರ್ಯ ಮಹತ್ವದ್ದಾಗಿದೆ.ಸರಳ,ನೈತಿಕ , ಜವಾಬ್ದಾರಿಯುತ ,ಪ್ರತಿಕ್ರಿಯಾತ್ಮಕ ಹಾಗೂ ಪಾರದರ್ಶಕ ಗುಣವುಳ್ಳ ಶಾಲಾ ನಾಯಕತ್ವ ಮತ್ತು ಶೈಕ್ಷಣಿಕ ಯೋಜನೆ ರೂಪಿಸುವ ಕಾರ್ಯವನ್ನು ಸಿಸ್ಲೆಪ್ ಮಾಡಲಿದೆ. ಬರುವ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಸಮಯದಲ್ಲಿ ಇನ್ನೊಮ್ಮೆ ಇಲ್ಲಿಗೆ ಭೇಟಿ ನೀಡಲಾಗುವುದು ಎಂದರು.
Recommended Video
ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಅನುಭವ ಶ್ರೀಮಂತಿಕೆ ದೊರೆತಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ನಿನ ಗಿರಿಧರ ರಚಿಸಿರುವ Ordinary People Extraordinary Teacher ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ಶಿಕ್ಷಕರಿಗೆ ತರಬೇತಿ ಅವಧಿಯಲ್ಲಿ ಒದಗಿಸುವ ಕಾರ್ಯ ಕೈಗೊಳ್ಳಲು ಸಚಿವ ಸುರೇಶ್ ಕುಮಾರ್ ಅವರು ಸಿಸ್ಲೆಪ್ ನಿರ್ದೇಶಕರಿಗೆ ಸೂಚಿಸಿದರು. ಸಿಸ್ಲೆಪ್ ನಿರ್ದೇಶಕ ಬಿ.ಎಸ್. ರಘುವೀರ ಅವರು , ಪ್ರಾತ್ಯಕ್ಷಿಕೆ ಮೂಲಕ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.