ಕಬ್ಬಿನ ಗದ್ದೆ ಹನಿ ನೀರಾವರಿಗೆ 1,800 ಕೋಟಿ ರೂ.
ಬೆಂಗಳೂರು, ನ. 10: ಕರ್ನಾಟಕದ 4.5 ಲಕ್ಷ ಎಕರೆ ಕಬ್ಬಿನ ಗದ್ದೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲು ಯೋಜನೆ ರೂಪಿಸಿರುವ ರಾಜ್ಯ ಜಲ ಸಂಪನ್ಮೂಲ ಇಲಾಖೆ, ಇದಕ್ಕಾಗಿ 1,800 ಕೋಟಿ ರೂ. ನಿಗದಿಪಡಿಸಿದೆ. ಯೋಜನೆಗೆ 2015ರ ಜನವರಿ 1ರಂದು ಚಾಲನೆ ನೀಡಲಾಗುವುದು.
ಈ ಕುರಿತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಧಾರವಾಡದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಈ ಯೋಜನೆಯಿಂದ ಕಬ್ಬು ಉತ್ಪಾದನೆ ಹೆಚ್ಚುವುದಲ್ಲದೆ, 184 ಟಿಎಂಸಿ ಫೀಟ್ ನೀರು ಹಾಗೂ 480 ಕೋಟಿ ರೂ.ಗಳಷ್ಟು ವಿದ್ಯುತ್ ಉಳಿತಾಯವಾಗಲಿದ್ದು, ಇಕೋ ಜನರೇಶನ್ ಮೂಲಕ 1,200 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.
ಪ್ರತಿ ಎಕರೆಗೆ ಹನಿ ನೀರಾವರಿ ಅಳವಡಿಸಲು 40 ಸಾವಿರ ರೂ. ವೆಚ್ಚವಾಗಲಿದೆ. ಇದಕ್ಕಾಗಿ ತ್ರಿಪಕ್ಷೀಯ ಒಪ್ಪಂದ ಮಾಡಲಾಗಿದೆ. ಇದರ ಪ್ರಕಾರ ಪ್ರತಿ ಎಕರೆಗೆ ಸರ್ಕಾರದಿಂದ 10 ಸಾವಿರ ರೂ. ಹಾಗೂ ಸಕ್ಕರೆ ಕಾರ್ಖಾನೆಯಿಂದ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಉಳಿದ ಮೊತ್ತಕ್ಕಾಗಿ ಪ್ರಾಯೋಜಕರು ಅಥವಾ ಬ್ಯಾಂಕ್ನಿಂದ ಸಾಲ ಕೊಡಿಸಲಾಗುವುದು ಎಂದು ವಿವರಿಸಿದರು. [ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ]
ವಾಲ್ಮಿ, ಕಾಡಾ ಪುನರುಜ್ಜೀವನ: ಧಾರವಾಡದಲ್ಲಿರುವ Water and Land Management Institute (WALMI) ಮತ್ತು Command Area Development Authorities (CADA) ಅನ್ನು ಶೀಘ್ರ ಪುನರುಜ್ಜೀವನಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.