ಧಾರವಾಡದಲ್ಲಿ ರಸ್ತೆ ಅಪಘಾತ; 5 ಲಕ್ಷ ರೂ. ಪರಿಹಾರ
ಧಾರವಾಡ, ಮೇ. 22: ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುತ್ತಿರುವುದಾಗಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ಜ್ಞಾನ ಭಾರತಿ ಬಳಿ ಕಾಲುವೆಯಲ್ಲಿ ಕೆಲಸ ಮಾಡುವಾಗ ಮೃತಪಟ್ಟ ಜಾರ್ಖಂಡ್ ಮೂಲದ ಕಾರ್ಮಿಕರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಸ್ವತಃ ಸಿಎಂ ಘೋಷಣೆ ಮಾಡಿದ್ದರು.
ಅಚ್ಚರಿ ಏನೆಂದರೆ, ಧಾರವಾಡದಲ್ಲಿ ಅಪಘಾತದಲ್ಲಿ ಮೃತಪಟ್ಟರೆ ಅವರಿಗೆ ಪರಿಹಾರ ನೀಡಬೇಕಾದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಬೇಕು. ಅವರ ಮನವಿ ಪರಿಗಣಿಸಿ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸ್ವ-ಇಚ್ಛೆಯಿಂದ ಪರಿಹಾರ ಘೋಷಣೆ ಬದಲು ಸಂಸದರ ಮನವಿ ಬೇಕೇ? ಎಂಬ ವಿಚಾರ ಇದೀಗ ಚರ್ಚೆಗೆ ನಾಂದಿ ಹಾಡಿದೆ. ಇನ್ನು ಅವಘಡದಲ್ಲಿ ಗಾಯಗೊಂಡಿರುವ 10 ಮಂದಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಸ್ಪಷ್ಟಪಡಿಸಿಲ್ಲ.
ಕೇವಲ ಮೃತರಿಗಷ್ಟೇ ನಿಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಪಘಾತದಲ್ಲಿ ಗಾಯಗೊಂಡಿರುವ ಮಂದಿಗೆ ಪರಿಹಾರ ಸಿಗುವುದು ಅನುಮಾನ. ಧಾರವಾಡ ಬಾಡಾ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ 9 ಜನರು ಮೃತಪಟ್ಟಿದ್ದರು. ಪ್ರಕರಣದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮನವಿ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಠಕರವಾಗಿದ್ದು, ಮೃತಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ನಿಶ್ಚಿತಾರ್ಥ ಮುಗಿಸಿಕೊಂಡು ಮಸಣ ಸೇರಿದರು: ಕ್ರುಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಧಾರಡವಾಡದ ಬಾಡಾ ಬಳಿ ಭೀಕರ ಅಪಘಾತ ಸಂಭವಿಸಿತ್ತು. 9 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದರು. ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದರು. ಆ ಬಳಿಕ ಇಬ್ಬರು ಜೀವ ಬಿಟ್ಟಿದ್ದರು. ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅವಘಡದಲ್ಲಿ ಅನನ್ಯ 14, ಹರೀಶ 13, ಶಿಲ್ಪಾ 34, ನೀಲವ್ಚ 60, ಮಧುಶ್ರೀ 20 ಮಹೇಶ್ವರಯ್ಯ 11, ಶಂಭುಲಿಂಗಯ್ಯ 35 ಮತ್ತಿತರರು ಸಾವನ್ನಪ್ಪಿದ್ದರು.
ಮದುವೆ ಮನೆ ಅಕ್ಷರಃ ಸ್ಮಶಾನವಾಗಿ ರೂಪಾಂತರಗೊಂಡಿತ್ತು. ಶನಿವಾರ ಬಾಡ ಕ್ರಾಸ್ಬಳಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಬೆನಕಣಕಟ್ಟಿ ಕ್ರಾಸ್ನಲ್ಲಿ ಮನೆ ಹೊಂದಿರುವ ನಿಗದಿ ಗ್ರಾಮದ ಕಲ್ಲಪ್ಪ ದಾಸನಕೊಪ್ಪ ಎಂಬುವವರ ಪುತ್ರ ಮಂಜುನಾಥ ವಿವಾಹ ಮನಸೂರು ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ನಡೆಯುತ್ತಿತ್ತು . ರಾತ್ರಿ ನಿಶ್ಚಿತಾರ್ಥ ಕೂಡ ಇಟ್ಟುಕೊಳ್ಳಲಾಗಿತ್ತು . ಈ ನಿಶ್ಚಿತಾರ್ಥಕ್ಕೆ ಬಂಧು , ಮಿತ್ರರು ಕ್ರೂಸರ್ ವಾಹನದಲ್ಲಿ ಹೋಗಿ ಮರಳಿ ಬರುತ್ತಿದ್ದ ವೇಳೆ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿಯಾಗಿತ್ತು.