ಧಾರವಾಡ; ಪ್ರವಾಹಕ್ಕೆ ಸಿಲುಕಿದ್ದ ನಾಲ್ವರ ರಕ್ಷಣೆ
ಧಾರವಾಡ, ಮೇ 20: ಮಳೆಯಿಂದ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೃಷಿ ಜಮೀನಿನಲ್ಲಿ ನೀರು ನಿಂತು ಕೊಳೆಯಲಾರಂಭಿಸಿವೆ. ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಅಲ್ಲಲ್ಲಿ ಮನೆಯ ಗೋಡೆಗಳು ಕುಸಿದಿವೆ.
ಇನ್ನೂ ಗೂಡ್ಸ್ ವಾಹನದ ಮೂಲಕ ಲಕ್ಷೇಶ್ವರ ಪಟ್ಟಣಕ್ಕೆ ತೆರಳಿ ಪುನಃ ಮರಳುವ ವೇಳೆ ಚಾಕಲಬ್ಬಿ ಗ್ರಾಮದ ಗೂಗಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರನ್ನು ಕುಂದಗೋಳ ತಾಲೂಕು ಆಡಳಿತ ರಕ್ಷಣೆ ಮಾಡಿದೆ.
ಬೆಣ್ಣೆಹಳ್ಳ, ತುಪರಿ ಹಳ್ಳಗಳು ತುಂಬಿದ್ದು, ಯರಗುಪ್ಪಿ, ಹಿರೇನರ್ತಿ, ಚಿಕ್ಕನರ್ತಿಯಿಂದ ಹುಬ್ಬಳ್ಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಶಾಲೆ, ಕಾಲೇಜುಗಳಿಗೆ ಇಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ.
ಲಕ್ಷ್ಮೇಶ್ವರಕ್ಕೆ 407 ವಾಹನ ಮೂಲಕ ಗೃಹ ಬಳಕೆ ವಸ್ತುಗಳ ವಿತರಣೆ ಮಾಡಿ, ಮರಳಿ ಸಂಶಿ, ಚಾಕಲಬ್ಬಿ ಮಾರ್ಗವಾಗಿ ಬರುವಾಗ ಗೂಗಿ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದರು. ಈ ಬಗ್ಗೆ ಸ್ಥಳೀಯರು ತಕ್ಷಣ ಪೊಲೀಸ್ ಹಾಗೂ ತಹಶೀಲ್ದಾರರಿಗೆ ಮಾಹಿತಿ ನೀಡಿದ್ದರು.
ಈ ವೇಳೆ ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರು ಹಗ್ಗ ಕಟ್ಟಿ, ಅಭಿಷೇಕ ಮೊರಬದ, ಸಿದ್ದಪ್ಪ ಮೊರಬದ, ಮಂಜುನಾಥ ಭಗವತಿ, ಶರಣಪ್ಪ ಲಕ್ಕುಂಡಿ ಎಂಬ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ಮೂಲಭೂತ ಸೌಲಭ್ಯ ಕಲ್ಪಿಸದಿರುವುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಧಾರವಾಡ ತಾಲೂಕಿನ ಮನಸೂರ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಅಮರಗೋಳ ಜನರಿಗೆ ಹೆಚ್ಚು ಕಡಿಮೆಯಾದರೆ ಅಧಿಕಾರಿಗಳು ಹಾಗೂ ಶಾಸಕರೇ ಹೊಣೆಗಾರರು. ಅಧಿಕಾರಿಗಳಿಗೆ ಅನೇಕ ಬಾರೀ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕನ್ಯೆ ನೋಡಲು ಹೋದ ಯುವಕ ಸಾವು; ಕನ್ಯೆ ನೋಡಲು ಹೋಗಿದ್ದ ಯುವಕ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದ ಬಳಿ ನಡೆದಿದೆ. ಗ್ರಾಮದ ಟಿಪ್ಪು ಸುಲ್ತಾನ್ (26) ಮೃತ ಯುವಕ.
ಗುರುವಾರ ಉಪ್ಪಿನ ಬೆಟಗೇರಿಗೆ ಕನ್ಯೆ ನೋಡಲು ಹೋಗಿ ವಾಪಸ್ ಮರಳಿ ಬರುವಾಗ ಈ ಘಟನೆ ನಡೆದಿದೆ. ನಿರಂತರ ಮಳೆ ಹಿನ್ನೆಲೆ ತುಂಬಿ ಹರಿಯುತ್ತಿದ್ದ ಕೋತಿ ಹಳ್ಳ ದಾಟಲು ಹುಚ್ಚು ಸಾಹಸ ಮಾಡಿದ್ದು, ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Recommended Video