ಹಿರೇಮಠ್ ವಿರುದ್ಧ ಜೋಶಿ ಮಾನನಷ್ಟ ಮೊಕದ್ದಮೆ
ಧಾರವಾಡ, ಮೇ 14 : ತಮ್ಮ ವಿರುದ್ಧ ಭಷ್ಟಾಚಾರದ ಆರೋಪ ಮಾಡಿದ್ದ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿ ಹಿರೇಮಠ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ದೂರಿನಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಹಿರೇಮಠ್ ಅವರು ತಮ್ಮನ್ನು ಭ್ರಷ್ಟ ಎಂದು ಕರೆದಿದ್ದಾರೆ ಎಂದು ಹೇಳಿರುವ ಜೋಶಿ, ಹಿರೇಮಠ್ ಅವರ ಆಧಾರ ರಹಿತ ಅಪಪ್ರಚಾರದಿಂದಾಗಿ ತಮ್ಮ ಸಾರ್ವಜನಿಕ ಜೀವನಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ.
ದೂರು ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದರು ಜೋಶಿ ಅವರು, "ನಾನು ಸಾರ್ವಜನಿಕ ಜೀವನದಲ್ಲಿ ಸ್ವಚ್ಛ ಮತ್ತು ನಿಷ್ಕಳಂಕವಾಗಿದ್ದೇನೆ. ನನ್ನನ್ನು ಯಾವುದೇ ಪದದಿಂದ ನಿಂದಿಸಿದರೂ ಸಹಿಸಿಕೊಳ್ಳುತ್ತೇನೆ. ಆದರೆ ಭ್ರಷ್ಟಾಚಾರಿ ಎಂದರೇ ಮಾತ್ರ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ". [ಹಿರೇಮಠ್ ವಿರುದ್ಧ ಕೇಸ್ ಹಾಕಿದ ರಮೇಶ್ ಕುಮಾರ್]
ಲೋಕಸಭೆ ಚುನಾವಣೆಯ ಸಮಯದಲ್ಲಿ ಹಿರೇಮಠ ಅವರು ಭ್ರಷ್ಟ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಇವರಿಗೆ ಮತ ನೀಡಬೇಡಿ ಎಂದು ಹೇಳಿದ್ದರು. ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ನನ್ನ ಮೇಲಿನ ಆರೋಪ ಆಧಾರ ರಹಿತವಾಗಿದ್ದು, ಆದ್ದರಿಂದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದು ಜೋಶಿ ತಿಳಿಸಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಹಿರೇಮಠ್, ದೂರು ದಾಖಲಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಹಿರೇಮಠ ಮಾಡಿದ್ದೇನು? : ಲೋಕಸಭೆ ಚುನಾವಣೆ ಸಮಯದಲ್ಲಿ ಎಸ್.ಆರ್.ಹಿರೇಮಠ ರಾಜ್ಯದ ಭ್ರಷ್ಟ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಜನರು ಈ ಅಭ್ಯರ್ಥಿಗಳಿಗೆ ಮತ ನೀಡಬಾರದು ಎಂದು ಮನವಿ ಮಾಡಿದ್ದರು.
ಹಿರೇಮಠ ಅವರ ಪಟ್ಟಿಯಲ್ಲಿ ಬೀದರ್ ಕಾಂಗ್ರೆಸ್ ಅಭ್ಯರ್ಥಿ ಧರ್ಮಸಿಂಗ್, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ, ಬೆಂಗಳೂರು ಉತ್ತರದ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದಗೌಡ, ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ, ಚಿಕ್ಕಬಳ್ಳಾಪುರದ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ, ಧಾರವಾಡದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಸೇರಿದಂತೆ 11 ಅಭ್ಯರ್ಥಿಗಳಿದ್ದರು.