ಮಾದಕವಸ್ತು ಮಾರಾಟ: ಪೊಲೀಸರಿಗೆ ಅಘಾತ ಕೊಟ್ಟ ಪೊಲೀಸ್!
ಬೆಂಗಳೂರು, ಸೆ. 15: ರಾಜ್ಯದಲ್ಲಿ ಡ್ರಗ್ ಮಾಫಿಯಾ ಕುರಿತು ತನಿಖೆ ತೀವ್ರಗೊಳ್ಳುತ್ತಿದೆ. ಪ್ರಭಾವಿಗಳು ಜೈಲಿನ ಕಂಬಿ ಎಣಿಸುವಂತಾಗಿದೆ. ನಿಧಾನವಾಗಿ ಡ್ರಗ್ ಮಾಫಿಯಾದೊಂದಿಗಿನ ಕುಣಿಕೆ ರಾಜಕಾರಣಿಗಳಿಗೂ ಸುತ್ತಿಕೊಳ್ಳುತ್ತಿದೆ. ಡ್ರಗ್ ಪೆಡ್ಲರ್ಗಳೊಂದಿಗೆ ರಾಜಕಾರಣಿಗಳು ಹೊಂದಿರುವ ನಂಟಿನ ಕುರಿತು ಫೋಟೊಗಳು ಬಿಡುಗಡೆಯಾಗುತ್ತಿದೆ.
ಬಿಜೆಪಿಯವರು ಕಾಂಗ್ರೆಸ್ ಪಕ್ಷದ ನಾಯಕರ ಫೋಟೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ನಾಯಕರು ಡ್ರಗ್ಸ್ ಪೆಡ್ಲರ್ಗಳೊಂದಿಗೆ ಬಿಜೆಪಿ ನಾಯಕರ ಫೋಟೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಿಸಿಬಿ ಪೊಲೀಸರು ಮಾತ್ರ ಇದ್ಯಾವುದರ ಕಡೆಗೆ ಗಮನ ಕೊಡದೇ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸಿಸಿಬಿ ಪೊಲೀಸರು ಕೊಡುತ್ತಿರುವ ಮಹತ್ವದ ಮಾಹಿತಿಯಿಂದ ರಾಜ್ಯಾದ್ಯಂತ ಡ್ರಗ್ ಪೆಡ್ಲರ್ಗಳ ಬಂಧನವಾಗುತ್ತಿದೆ. ಈ ವರೆಗೆ ಸಿನಿ ತಾರೆಯರು, ಡ್ರಗ್ ಪಡೆಡ್ಲರ್ಗಳು ಮಾತ್ರ ಡ್ರಗ್ ಮಾಫಿಯಾ ಕುರಿತಂತೆ ಬಂಧನಕ್ಕೆ ಒಳಗಾಗಿದ್ದರು. ಇದೀಗ ಪೊಲೀಸ್ ಕಾನ್ಸ್ಟೆಬಲ್ ಒಬ್ಬ ಬಂಧನಕ್ಕೆ ಒಳಗಾಗಿರುವ ಅಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಡ್ರಗ್ ಮಾಫಿಯಾ ಸಂಬಂಧ-ಬಂಧನ
ಡ್ರಗ್ಸ್ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿರುವ ಆರೋದಪ್ಪಿ ಈಗಾಗಲೇ ಹಲವು ಜನರನ್ನು ಸಿಸಿಬಿ ಬಂಧಿಸಿದೆ. ಸಿನಿ ತಾರೆಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗುಲ್ರಾನಿ ಸೇರಿದಂತೆ ಹಲವರು ಜೈಲು ಪಾಲಾಗಿದ್ದಾರೆ. ಬೆಂಗಳೂರಿನಲ್ಲಿ ತನಿಖೆ ತೀವ್ರವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ಮಾಹಿತಿ ಆಧರಿಸಿ ಹಾಗೂ ಸ್ಥಳೀಯ ಪೊಲೀಸರ ತನಿಖೆಯಿಂದ ಹಲವು ಅಘಾತಕಾರಿ ಅಂಶಗಳು ಬಹಿರಂಗವಾಗುತ್ತಿವೆ.
ಕ್ವಿಂಟಾಲು ಗಟ್ಟಲೇ ಗಾಂಜಾ ಪತ್ತೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸನೊಬ್ಬ ಧಾರವಾಡದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.
ಧಾರವಾಡದಲ್ಲಿ ಪೊಲೀಸ್ ಬಂಧನ
ಗಾಂಜಾ ಮಾರಾಟದ ಕರಾಳ ಮುಖಗಳು ಒಂದೊಂದಾಗಿ ಬಯಲಾಗುತ್ತಿವೆ. ಅದಕ್ಕೆ ಸಾಕ್ಷಿಯಂಬಂತೆ ಧಾರವಾಡ ಉಪನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಪೊಲೀಸಪ್ಪನೇ ಸಿಕ್ಕಿಬಿದಿದ್ದು, ಗಾಂಜಾ ಮಾರಾಟದಲ್ಲಿ ಪೊಲೀಸರು ಇರುವುದು ಖಚಿತವಾಗಿದೆ.
ಗಾಂಜಾ ಮಾರುತ್ತಿದ್ದ ಬೆಂಗಳೂರು ಮೂಲದ ಪೊಲೀಸನ ಬಂಧನವಾಗಿದ್ದು, ಆರೋಪಿಯನ್ನ ಸಂಜು ಪಾಟೀಲ್ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕನದಾಳ ಗ್ರಾಮದ ಸಂದೀಪ ಪಾಟೀಲ, ಧಾರವಾಡದ ಮುರಘಾಮಠದ ಹತ್ತಿರದಲ್ಲಿ ಮನೆ ಮಾಡಿಕೊಂಡಿದ್ದ ವಾಸಿಸುತ್ತಿದ್ದ. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ ಮನೆಯನ್ನು ಮಾತ್ರ ಧಾರವಾಡದಲ್ಲಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿತ್ತು.
ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಬಂಧಿತ ಪೊಲೀಸ್ನಿಂದ 283 ಗ್ರಾಂ ಗಾಂಜಾ ಹಾಗೂ 1 ಮೊಬೈಲ್ ಜಪ್ತಿ ಮಾಡಿದ್ದಾರೆ. ನಂತರ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ಆರೋಪಿ ಸಂದೀಪ ಪಾಟೀಲಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದೆ. ಹೀಗಾಗಿ ಇದೀಗ ಆರೋಪಿಯನ್ನ ಹಿಡಿದ ಉಪನಗರ ಪೊಲೀಸರು ಕೊರೋನಾ ಪಾಸಿಟಿವ್ ಆರೋಪಿಯಿಂದ ಸಂಕಟ ಎದುರಿಸುವಂತಾಗಿದೆ.
ಮತ್ತೊಂದು ಪ್ರಕರಣ
ಧಾರವಾಡ ಉಪನಗರ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರುತ್ತಿದ್ದ ಯುವಕರ ಗ್ಯಾಂಗನ್ನ ಬಂಧನ ಮಾಡಿದ್ದಾರೆ. ಸಮೀವುಲ್ಲಾ ಹುಬ್ಬಳ್ಳಿ (22) ಧಾರವಾಡದ ನಾರಾಯಣಪುರದ ನಿವಾಸಿ, ಜಡಸನ್ ಮಿರಜಕರ (25) ನಾರಾಯಣಪೂರ ನಿವಾಸಿ, ಮಂಜುನಾಥ ಜತ್ಲಿ (23) ಗರಗ ಗ್ರಾಮದ ನಿವಾಸಿ, ಸಂಗಮೇಶ ಅಂಗಡಿ (23) ದಾನೇಶ್ವರ ನಗರದ ನಿವಾಸಿ ಯಾಗಿದ್ದು, ಬಂಧಿತರಿಂದ 1 ಕೆಜಿ 75 ಗ್ರಾಂ ಗಾಂಜಾ, 4 ಮೊಬೈಲ್ ಹಾಗೂ 2 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
Recommended Video
ರಾಜಕೀಯ ನಾಯಕರ ಫೋಟೊ ಬಿಡುಗಡೆ
ಇವುಗಳೊಂದಿಗೆ ರಾಜಕೀಯ ನಾಯಕರು ಡ್ರಗ್ ಮಾಫಿಯಾದೊಂದಿಗೆ ನಂಟಿನ ಆರೋಪ ಹೊಂದಿರುವ ಆರೋಪಿಗಳೊಂದಿಗೆ ಇರುವ ಫೋಟೊಗಳನ್ನು ಬಿಜೆಪಿ-ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡುವ ಮೂಲಕ ಡ್ರಗ್ ಮಾಫಿಯಾ ಪ್ರಕರಣಕ್ಕೆ ಮೆರಗು ತಂದಿದ್ದಾರೆ.
ನಿನ್ನೆಯಷ್ಟೇ ಸಚಿವ ಸಿ.ಟಿ. ರವಿ ಅವರು ಡ್ರಗ್ ಪೆಡ್ಲರ್ ಫಾಸಿಲ್ ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಇರುವ ಫೋಟೊಗಳನ್ನು ಬಿಡುಗಡೆ ಮಾಡಿದ್ದರು.
ಇವತ್ತು ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕಂದಾಯ ಸಚಿವ ಆರ್. ಅಶೋಕ್ ಅವರು ಡ್ರಗ್ ಹಗರಣದ ಕಿಂಗ್ಪಿನ್ ರಾಹುಲ್ ಜೊತೆಗೆ ಇರುವ ಫೋಟೊಗಳನ್ನು ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ತಮ್ಮ ತಮ್ಮ ಬಣ್ಣವನ್ನು ರಾಜಕೀಯ ವ್ಯಕ್ತಿಗಳು ತಾವೇ ಬಯಲು ಮಾಡಿಕೊಳ್ಳುತ್ತಿದ್ದಾರೆ.