ಧಾರವಾಡ; ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಹೃದಯಾಘಾತವಾಗಿ ವ್ಯಕ್ತಿ ಸಾವು
ಧಾರವಾಡ, ಫೆಬ್ರವರಿ 18: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕುಳಿತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೈಫುಲ್ಲಾ ಸಾಹುಕಾರ (45) ಮೃತಪಟ್ಟ ವ್ಯಕ್ತಿ. ಧಾರವಾಡದ ನೀಮ್ ಟ್ರೀ ಗಾರ್ಡನ್ ನಿವಾಸಿ ಸೈಫುಲ್ಲಾ ಅವರು ನಿನ್ನೆ ಫೆಬ್ರವರಿ 17 ರಂದು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಕುಳಿತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
ಜಯದೇವ ಹೃದ್ರೋಗ ತಜ್ಞ ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿ
ಧಾರವಾಡ ನಗರದ ಮಸೀದಿಗಳ ಕಡೆಯಿಂದ ನಿನ್ನೆ ಸಿಎಎ ವಿರೋಧಿ ಪ್ರತಿಭಟನೆ ಹಮ್ಮಿಕೊಂಡು ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸುತ್ತಿದ್ದರು. ಖೂಬಾ ಮಸೀದಿ ವತಿಯಿಂದ ಸೈಫುಲ್ಲಾ ಧರಣಿ ನಡೆಸುತ್ತಿದ್ದರು. ದೀರ್ಘಕಾಲ ಬಿಸಿಲಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇ ಹೃದಯಾಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.