ಬೆಂಗಳೂರು ವಿಮಾನ ನಿಲ್ದಾಣಕ್ಕೆ ಚಾಲುಕ್ಯರ, ರಾಷ್ಟ್ರಕೂಟರ ಹೆಸರಿಡಿ: ಪಾಪು
ಹುಬ್ಬಳ್ಳಿ, ಜೂನ್ 12: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ಅಷ್ಟೇನೂ ಸಮಂಜಸವಲ್ಲವೆಂದು ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಪಾಪು ಅವರು, ರಾಜ್ಯದಲ್ಲಿ ರಾಜಮನೆತನಗಳ ಆಡಳಿತವಿತ್ತು. ಕದಂಬರು, ಕಲಚೂರ್ಯರು, ಕಲ್ಯಾಣಿ ಚಾಲುಕ್ಯರು ಮತ್ತು ವಿಜಯನಗರದ ಅರಸರು ರಾಜ್ಯವನ್ನಾಳಿದ್ದಾರೆ.
ಆದರೆ, ಕರ್ನಾಟಕ ರಾಜ್ಯ ಅರವತ್ತು ವರ್ಷವಾಯಿತು ಅಸ್ತಿತ್ವಕ್ಕೆ ಬಂದು. ಮೈಸೂರು ಕಡೆಯವರಿಗೆ ಕರ್ನಾಟಕ ವಿಶಾಲ ವ್ಯಾಪ್ತಿಯ ಹೊಂದಿದೆ ಎಂಬುದೇ ಅರಿವಿಲ್ಲ. ಹೀಗಾಗಿ ರಾಜ್ಯವನ್ನಾಳಿದ ಚಾಲುಕ್ಯರ ಅಥವಾ ರಾಷ್ಟ್ರಕೂಟರ ಹೆಸರನ್ನು ಬಹುದೊಡ್ಡ ಸ್ಥಳಗಳಿಗೆ ಇಡದಿರುವುದು ಶೋಚನೀಯ ಎಂದಿದ್ದಾರೆ.
ಕೆಂಪೇಗೌಡ ಮಾಗಡಿ ಮತ್ತು ಮಾಲೂರು ಪ್ರದೇಶಗಳ್ನು ಆಳುತ್ತಿದ್ದ ಒಬ್ಬ ಚಿಕ್ಕ ಪಾಳೇಗಾರ. ಆದರೆ, ಚಾಲುಕ್ಯರು ಮತ್ತು ರಾಷ್ಟ್ರಕೂಟರು ದೇಶದ ಬಹುಪಾಲು ಭಾಗವನ್ನು ಆಳಿದ್ದಾರೆ. ಇನ್ನು ಇವರ ಆಡಳಿತದಲ್ಲಿ ಬಂಗಾಲ, ಅಸ್ಸಾಂಗಳು ಕೂಡ ಇದ್ದವು. ಇವುಗಳಲ್ಲಿ ಕರ್ನಾಟಕವೂ ಒಂದು.
ಆದರೆ, ಮೈಸೂರು ಭಾಗದವರು ರಾಜ್ಯವನ್ನು ತೈಲಪ, ಹೊಯ್ಸಳರ ನಾಡೆಂದುಕೊಂಡಿದ್ದಾರೆ. ಕವಿ ಕುವೆಂಪು ಕೂಡ ನಾಡಗೀತೆಯಲ್ಲಿ ಇವೆರಡೇ ಹೆಸರುಗಳನ್ನು ಬಳಸಿದ್ದಾರೆ.
ರಾಜ್ಯದ ರಾಜಕಾರಣಿಗಳಿಗೆ ಪುಟ್ಟ ಪಾಳೇಗಾರನಾದ ಕೆಂಪೇಗೌಡ ಮಾತ್ರ ಕಾಣುತ್ತಾನೆ. ಆದರೆ, ಕಲ್ಯಾಣ , ಕಲಬುರಗಿ, ಹಂಪಿಯ ಐತಿಹಾಸಿಕ ಹಿನ್ನೆಲೆಗಳು ಯಾಕೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯವನ್ನಾಳಿದ್ದ ಕದಂಬರ ರಾಜಧಾನಿ ಬನವಾಸಿ, ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮುಳಖೇಡಾ ಯಾಕೆ ಕಾಣುತ್ತಿಲ್ಲ. ರಾಜಧಾನಿಗಳಾಗಿದ್ದ ಈ ನಗರಗಳು ಈಗ ಗ್ರಾಮಗಳಾಗಿ ಪರಿವರ್ತನೆಗೊಂಡಿರುವುದಕ್ಕೆ ಈ ತಾರತಮ್ಯವೇ ಎಂದು ಪಾಪು ಪ್ರಶ್ನಿಸಿದರು. (ಒನ್ಇಂಡಿಯಾ ಸುದ್ದಿ)