ಗದಗದಲ್ಲಿ ಪುಟ್ಟರಾಜರ ಶತಮಾನೋತ್ಸವ ಸಮಾರಂಭ
ಗದಗ, ಏ. 21 : ಡಾ. ಪಂ. ಪುಟ್ಟರಾಜರ ಜೀವನ, ಸಾಧನೆ, ಸಂದೇಶವನ್ನು ಸದಾ ಹಸಿರಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಗದಗ ಬೆಟಗೇರಿ ಅವಳಿ ನಗರದ ಅಭಿಮಾನಿ ಭಕ್ತರೆಲ್ಲ ಸೇರಿಕೊಂಡು ಸ್ಥಾಪಿಸಿರುವ ಪಂ. ಪುಟ್ಟರಾಜ ಸೇವಾ ಸಮಿತಿಯ ದಶಮಾನೋತ್ಸವ ಮತ್ತು ಪುಟ್ಟರಾಜರ ನೂರನೆ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ.
2004ರಲ್ಲಿ ಸ್ಥಾಪನೆಯಾದ ಈ ಸೇವಾ ಸಮಿತಿಯು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವ ಹೊಂದಿದೆ. ಕರ್ನಾಟಕದಿಂದ ಹೊರಗಡೆ ನೆಲೆಸಿರುವ ಹಲವಾರು ಭಕ್ತಾದಿಗಳು ಕೂಡ ಈ ಸೇವಾ ಸಮಿತಿಯ ಸದಸ್ಯರಾಗಿದ್ದಾರೆ.
ಸಂಗೀತ, ಸಾಹಿತ್ಯ ಸಂಬಂಧಿ ಚಟುವಟಿಕೆಗಳು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು, ಈ ಪವಿತ್ರ ಕಾರ್ಯಕ್ಕೆ ಅವಳಿ ನಗರದ ಅಭಿಮಾನಿ ಭಕ್ತರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡು ತನು ಮನ ಧನದ ಸಹಕಾರ ನೀಡಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕೆಂದು ಎಂದು ಸೇವಾ ಸಮಿತಿಯ ರಾಜ್ಯ ಸಂಚಾಲಕ ವೇ. ಪಂ. ಚನ್ನವೀರ ಸ್ವಾಮೀ ಹಿರೇಮಠ ಕಡಣಿ ವಿನಂತಿಸಿಕೊಂಡರು. [ಪಂಡಿತ ಪುಟ್ಟರಾಜ ಗಾನಗಂಗೆಯಲ್ಲಿ ಲೀನ]
ಅವರು ದಿನಾಂಕ 18-4-2014ರಂದು ಸಂಜೆ 4-30ಕ್ಕೆ ಪಂಚಾಕ್ಷರಿ ನಗರದ 4ನೇ ಕ್ರಾಸ್ ನಲ್ಲಿರುವ ಡಾ.ಪಂ.ಪು.ಸೇವಾಸಮಿತಿಯ ಕಾರ್ಯಾಲಯದಲ್ಲಿ ಕರೆಯಲಾದ ಗದಗ ಜಿಲ್ಲಾ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಭಕ್ತರ ಮಹಾ ಬಳಗದ ಸಭೆಯನ್ನು ಉದ್ದೇಶಿಸಿ ವರ್ಷಪೂರ್ತಿ ನಡೆಸುತ್ತಿರುವ ಕಾರ್ಯಕ್ರಮದ ಬಗ್ಗೆ ಹಿರೇಮಠ ಅವರು ವಿವರಣೆ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶರಣಯ್ಯ ಹಿರೇಮಠ, ಬೆಂಗಳೂರು ಇವರು ಮಾತನಾಡಿ, ಮಾಹಿತಿ ತಂತ್ರಜ್ಞಾನ ಮಿತ್ರರೆಲ್ಲ ಸೇರಿಕೊಂಡು ಪೂಜ್ಯರ ಕುರಿತು ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಒಂದು ವೆಬ್ ಸೈಟ ಅಸ್ತಿತ್ವಕ್ಕೆ ತರಲಾಗುತ್ತಿದೆ ಮತ್ತು ಪೂಜ್ಯರ ಕುರಿತು ಧ್ವನಿ ಸಾಂದ್ರತೆ ತರುವುದು ಮತ್ತು ಪೂಜ್ಯರ ಸಮಗ್ರ ಕೃತಿಗಳನ್ನು ಈ ಸೈಟ್ ಮೂಲಕ ದಾಖಲಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರಾಯಚೂರ ಜಿಲ್ಲಾ ಸಂಚಾಲಕರಾದ ಸಾಹಿತಿ, ಪ್ರೊ. ರಮೇಶ ಬಾಬು ಯಾಳಗಿ ಮಾತನಾಡಿ, ಪೂಜ್ಯರ ಕುರಿತು ಸಾಹಿತ್ಯ ರಚನೆ ಮತ್ತು ಪ್ರಕಟಣೆ ಮಾಡಲಾಗುವುದು ಅದರ ಪ್ರಥಮ ಅಂಗವಾಗಿ 'ಕಣ್ಣಿದ್ದರೇನಂತೆ' ಪುಟ್ಟರಾಜರ ಹದಿನೆಂಟು ವಚನಗಳ ಹೊಳವುಗಳು ಕೃತಿ ಲೋಕಾರ್ಪಣೆಗೆ ಸಿದ್ದವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ರಾಮನಕೊಪ್ಪ ಗದಗ ಅವರು ವಹಿಸಿಕೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ ಮಂಗಳೂರ, ಪ್ರಭು ಪ್ರಸಾದ ಬೆಂಗಳೂರು, ಗುರುಪ್ಪಾ ತಿರ್ಲಾಪುರ, ಎಫ್ಎ ಹಿರೇಮಠ, ಎಂಎಸ್ ಹಿರೇಮಠ ಉಪಸ್ಥಿತರಿದ್ದರು. ಕು. ಅರ್ಚನಾ ಹಿರೇಮಠ ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಗೌಡ ಪಾಟೀಲ ಸ್ವಾಗತಿಸಿದರು ಸದಸ್ಯ ಪ್ರಭುರಾಜಗೌಡ ವಂದಿಸಿದರು.
ಪುಟ್ಟರಾಜ ಕುರಿತ ಚಲನಚಿತ್ರ : ಪುಟ್ಟರಾಜ ಗವಾಯಿಗಳ ಸಂಪೂರ್ಣ ಜೀವನ ಚರಿತ್ರೆ ಆಧಾರಿತ 'ಶಿವಯೋಗಿ ಪುಟ್ಟಯ್ಯಜ್ಜ' ಎಂಬ ಚಿತ್ರವೀಗ ನಿರ್ಮಾಣವಾಗಿದೆ. ನಟ ವಿಶ್ವ ವಿಜೇತರ ಪುತ್ರಿ ಹಂಸವಿಜೇತ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಪುಟ್ಟರಾಜ ಗವಾಯಿಗಳ ಪಾತ್ರ ನಿರ್ವಹಿಸಿದ್ದಾರೆ. ['ಶಿವಯೋಗಿ ಪುಟ್ಟಯ್ಯಜ್ಜ'ನಾಗಿ ವಿಜಯರಾಘವೇಂದ್ರ]