ದಲಿತರ ಮನೆಯಲ್ಲಿ ನಿಜಗುಣಾನಂದ ಶ್ರೀ ಊಟ, ಪೇಜಾವರ ಶ್ರೀ ವಿರುದ್ಧ ಕಿಡಿ
ಧಾರವಾಡ, ಜನವರಿ 13: ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಸ್ವಾಮೀಜಿ ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ಇದೇ ವೇಳೆ ಅವರು ದಲಿತರ ಬಗೆಗಿನ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನಡೆಯನ್ನು ಟೀಕಿಸಿದ್ದಾರೆ.
ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸ್ವಾಮೀಜಿ ಇಂದು ಧಾರವಾಡದ ಮಾಳಾಪೂರದ ಹರಿಜನಕರೆಯಲ್ಲಿ ಇರುವ ನಾಗರಾಜ್ ಸಣ್ಣಮನಿ ಎನ್ನುವರ ಮನೆಯಲ್ಲಿ ಊಟ ಸೇವಿಸಿದ್ದಾರೆ.
ನಂತರ ಮಾತನಾಡಿದ ಅವರು, "ವೈದಿಕತೆ, ಬ್ರಾಹ್ಮಣತ್ವ ಹಾಗೂ ರಾಜಕೀಯ ಉಳಿಸಿಕೊಳ್ಳಲು ಪೇಜಾವರ ಶ್ರೀಗಳು ದಲಿತರ ಮನೆಗಳಿಗೆ ಹೊಗುತ್ತಾರೆ. ನಾವು ಲಿಂಗಾಯತ ಸ್ವಾಮೀಜಿಗಳು ಫ್ಯಾಷನ್ ಗಾಗಿ ದಲಿತರ ಮನೆಗಳಿಗೆ ಹೋಗುತ್ತಿಲ್ಲ," ಎಂದಿದ್ದಾರೆ.
"ಬಸವಣ್ಣ ವೇಶ್ಯೆಯನ್ನು ಅಪ್ಪಿಕೊಂಡಿದ್ದಾರೆ. ದಲಿತರು ಈ ದೇಶದ ಮೂಲ ನಿವಾಸಿಗಳು. ದಲಿತರು ಎಂದರೆ ದೇವರು. ಹೀಗಾಗಿ ನಾವು ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದೇವೆ. ದೇಶದ ಮೂಲ ನಿವಾಸಿಗಳು ಇಂದು ಅಸ್ಪೃಷ್ಯರಾಗಿದ್ದಾರೆ. ಈ ದೇಶದಲ್ಲಿ ಬದುಕಲು ಹಕ್ಕಿರುವುದು ದಲಿತರಿಗೆ," ಎಂದು ಹೇಳಿದ್ದಾರೆ.
ಇನ್ನು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡಿದ ನಿಜಗುಣಾನಂದ ಶ್ರೀಗಳು, "ಧರ್ಮ ಎನ್ನುವುದು ಒತ್ತಾಯಪೂರ್ವಕ ಅಲ್ಲ. ಅದನ್ನ ಒತ್ತಾಯದಿಂದ ಮಾಡುವುದು ಅಲ್ಲ. ಲಿಂಗಾಯತ ಹೋರಾಟದ ಬಗ್ಗೆ ಇನ್ನು ನಾಲ್ಕೈದು ದಿನದಲ್ಲಿ ಹೇಳುತ್ತೇನೆ," ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಿಜಗುಣಾನಂದ ಸ್ವಾಮೀಜಿಗಳು, "ವೇಶ್ಯೆಯರನ್ನು ಮತ್ತು ದಲಿತರನ್ನು ಲಿಂಗಾಯತ ಧರ್ಮಕ್ಕೆ ಸೆರಿಸಿಕೊಳ್ಳುತ್ತೇವೆ," ಎಂದಿದ್ದರು. ಇದೀಗ ಅವರು ದಲಿತರ ಮನೆಗೆ ಹೋಗಿ ಆಹಾರ ಸೇವಿಸಿ ಬಂದಿದ್ದಾರೆ.