'ಮಠಾಧೀಶರು ರಾಜಕಾರಣಿ ಆಗುತ್ತೇನೆ ಎಂಬುದು ಹುಚ್ಚರ ಸಂತೆ'
ಧಾರವಾಡ, ಡಿಸೆಂಬರ್ 21: ರಾಜಕೀಯದತ್ತ ಒಲವು ತೋರುತ್ತಿರುವ ಕೆಲ ಸ್ವಾಮೀಜಿಗಳ ನಡೆಗೆ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ದರಾಮ ಸ್ವಾಮೀಜಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಧಾರವಾಡದಲ್ಲಿ ಮಾತನಾಡಿದ ಡಾ. ಸಿದ್ದರಾಮ ಸ್ವಾಮೀಜಿ, "ರಾಜಕಾರಣಕ್ಕೆ ಪ್ರವೇಶ ಬಯಸಿ ಚುನಾವಣೆಗೆ ನಿಲ್ಲುವ ಮಠಾಧೀಶರನ್ನು ಆಯಾ ಮಠಗಳ ಭಕ್ತರೇ ಅಂತಹ ಸ್ವಾಮೀಜಿಗಳನ್ನು ಮಠ ಬಿಡಿಸಿ ಹೊರ ಹಾಕಬೇಕು" ಎಂದರು.
ಚುನಾವಣಾ ಪೂರ್ವː ಕಾವಿ-ಖಾದಿಧಾರಿಗಳ ನಡುವೆ ಮೈತ್ರಿ ಏನು? ಎತ್ತ?
ಮಠಕ್ಕೆ ರಾಜಕಾರಣ ಬಯಸುವ ಸ್ವಾಮೀಜಿಗಳ ಅಗತ್ಯವಿಲ್ಲ. ಹೀಗಾಗಿ ರಾಜಕಾರಣದಿಂದ ದೂರ ಇರುವ ಮಠಾಧೀಶರನ್ನು ಭಕ್ತರೇ ತಂದು ಇಟ್ಟುಕೊಳ್ಳಬೇಕು.
ರಾಜಕಾರಣಕ್ಕೆ ಪ್ರವೇಶ ಬಯಸುವುದು ಆಯಾ ವ್ಯಕ್ತಿಗಳ ಮನಸ್ಥಿತಿಗೆ ಸಂಬಂಧಿಸಿದ್ದು ಆಗಿದೆ. ಆದರೆ ಉತ್ತರ ಪ್ರದೇಶದ ಸಿಎಂ ಯೋಗಿ ಅವರಿಂದ ಪ್ರೇರಣೆ ಪಡೆದು ರಾಜ್ಯದ ಎರಡ್ಮೂರು ಜನ ಮಠಾಧೀಶರು ಸಹ ಚುನಾವಣೆಗೆ ನಿಲ್ಲಲು ಮುಂದಾಗಿದ್ದು, ಅದಕ್ಕಾಗಿ ಟಿಕೆಟ್ ನೀಡುವಂತೆ ಮನವಿ ಕೂಡ ಸಲ್ಲಿಸಿದ್ದಾರೆ. ಮಠಾಧಿಶರಿಗೆ ಇಂತಹ ಭ್ರಮೆ ಒಳ್ಳೆಯದಲ್ಲ.
ರಾಜಕಾರಣ ಪ್ರವೇಶ ಮಾಡಿ ಅಲ್ಲಿ ಕೆಲಸ ಮಾಡುವ ಅಗತ್ಯವೂ ಮಠಾಧೀಶರಿಗೆ ಇಲ್ಲ. ಇನ್ನೂ ಮಠಾಧೀಶರು ತಾವು ರಾಜಕಾರಣಿ ಆಗುತ್ತೇನೆ ಎಂಬುದು ಮಾತ್ರ ಹುಚ್ಚರ ಸಂತೆ ಆಗಿದೆ ಎಂದು ವ್ಯಂಗ್ಯವಾಡಿದರು.