ಪೈಗಂಬರ್ ಸಲಿಂಗಕಾಮಿ : ಸಿಡಿದೆದ್ದ ಹುಬ್ಬಳ್ಳಿ ಮುಸ್ಲಿಮರು
ಹುಬ್ಬಳ್ಳಿ,ಡಿಸೆಂಬರ್, 12: ಮುಸ್ಲಿಂ ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಕೀಳಾಗಿ ಮಾತನಾಡಿ ಪ್ರವಾದಿಯವರನ್ನು ಅವಹೇಳನ ಮಾಡಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಕಾರ್ಯಕಾರಿ ಅಧ್ಯಕ್ಷ ಕಮಲೇಶ ತಿವಾರಿಯನ್ನು ಬಂಧಿಸುವಂತೆ ಒತ್ತಾಯಿಸಿ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ನಗರದ ತಹಶೀಲ್ದಾರ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಮುಸ್ಲಿಂ ಸಮುದಾಯದವರು ಕೈಗೊಂಡ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರೂ ಭಾಗವಹಿಸಿದ್ದು ಪ್ರತಿಭಟನೆಯಲ್ಲಿ ಸಮಾಜದ ಸೌಹಾರ್ದತೆ ಕೆಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಕಮಲೇಶ ತಿವಾರಿ ಅವರ ಪ್ರತಿಕೃತಿ ದಹಿಸಿದರು.[ಹಿಂದೂ ಮಹಾಸಭಾದಿಂದ ನಾಥೂರಾಂ ಗೋಡ್ಸೆ ವೆಬ್ ಸೈಟ್ ಅನಾವರಣ]
ಸಮಾಜದಲ್ಲಿ ಕೋಮುಭಾವನೆಯನ್ನು ಕದಡುವಂತಹ ಹೇಳಿಕೆ ನೀಡಿರುವ ಕಮಲೇಶ ತಿವಾರಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಇಂತಹವರಿಂದಲೇ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದ ಪ್ರತಿಭಟನಾಕಾರರು ಅವರ ಮೇಲೆ ಕಿಡಿ ಕಾರಿದರು.
ದೇಶದೆಲ್ಲೆಡೆ ಜನರು ಹಿಂದೂ, ಮುಸ್ಲಿಂ, ಕ್ರೈಸ್ತ, ಮೇಲು-ಕೀಳು, ಬಡವ ಬಲ್ಲಿದ ಎಂಬ ಭೇದ ತೋರದೆ ಪ್ರೀತಿ, ವಿಶ್ವಾಸದಿಂದ ಬಾಳುತ್ತಿದ್ದಾರೆ. ತಿವಾರಿಯವರಂತಹವರ ಹೇಳಿಕೆಯಲ್ಲಿ ಎಲ್ಲ ಸಮುದಾಯದವರು ಸಹೋದರತ್ವ ಮರೆತು ವೈರತ್ವ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು.[ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವರೇ : ಆರೆಸ್ಸೆಸ್]
ಕಮಲೇಶ ತಿವಾರಿ ಹೇಳಿದ ಹೇಳಿಕೆ ಏನು?
ಉತ್ತರ ಪ್ರದೇಶ ಸಚಿವ ಅಜಂಖಾನ್ ಅವರು, 'ಆರ್ ಎಸ್ಎಸ್ ನವರು ಸಲಿಂಗಕಾಮಿಗಳು' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಿವಾರಿಯವರು 'ಮಹಮ್ಮದ್ ಪೈಗಂಬರ್ ಜಗತ್ತಿನ ಮೊದಲ ಸಲಿಂಗಕಾಮಿ' ಎಂದು ಪತ್ರಿಕಾ ಪ್ರಕಟಣೆ ನೀಡಿ, ಪಾಂಪ್ಲೇಟ್ ಹಂಚಿದ್ದರು.
ಈ ಹೇಳಿಕೆ ನೀಡಿದ ತಿವಾರಿ ಅವರನ್ನು ಪೊಲೀಸರು ಬಂಧಿಸಿದ್ದು, ಕಮಲೇಶ್ ತಿವಾರಿ ಹಾಗೂ ಉತ್ತರ ಪ್ರದೇಶ ಸಚಿವ ಅಜಂಖಾನ್ ಅವರನ್ನು ಗಲ್ಲಿಗೆ ಏರಿಸಬೇಕೆಂದು ಮುಸಲ್ಮಾನರು ಒತ್ತಾಯಿಸಿದರು.