ವಾಜಪೇಯಿ, ಬಿಎಸ್ ವೈ ಗಾಳಿಯಲ್ಲಿ ಗೆದ್ದುಬಂದ ಪ್ರಹ್ಲಾದ ಜೋಶಿ: ಸಚಿವ ಕುಲಕರ್ಣಿ
ಧಾರವಾಡ, ಅಕ್ಟೋಬರ್ 21 : ಪ್ರಹ್ಲಾದ ಜೋಶಿಯವರಿಗೆ ಪಾಲಿಕೆ ಚುನಾವಣೆ ಗೆಲ್ಲೋದಕ್ಕೂ ಆಗಿರಲಿಲ್ಲ. ಆದರೆ ಜಾತಿ ಗಲಭೆ ಸೃಷ್ಟಿಸಿ, ಈದ್ಗಾ ಮೈದಾನದ ವಿಷಯದ ಮೇಲೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಗದ್ದಲ ಆದರೂ ಜೋಶಿಯಂಥವರ ಮೇಲೆ ಕೇಸ್ ಇಲ್ಲ. ಹಿಂದೂ ಹುಡುಗರ ದಾರಿ ತಪ್ಪಿಸಿ, ಧರ್ಮದ ಗಲಭೆ ಸೃಷ್ಟಿಸಿದ್ದಾರೆ ಎಂದು ಸಚಿವ ವಿನಯ ಕುಲಕರ್ಣಿ ಆರೋಪಿಸಿದ್ದಾರೆ.
'ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮುಲಾಜಿಲ್ಲದೆ ಟಿಪ್ಪು ಜಯಂತಿ ರದ್ದು'
ಟಿಪ್ಪು ಜಯಂತಿ ವಿಷಯದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದ ಪ್ರಹ್ಲಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧಾರವಾಡ ಜಿಲ್ಲೆಯಲ್ಲಿಯೇ ಇವರಿಂದ ಅನೇಕ ಹಿಂದೂ ಯುವಕರ ಭವಿಷ್ಯ ಹಾಳಾಗಿದೆ. ಸಮಾನತೆಯಿಂದ ಇರುವುದು ನಮ್ಮ ಕರ್ತವ್ಯ. ನಮ್ಮ ಸರಕಾರ ಬಂದರೆ ಟಿಪ್ಪು ಜಯಂತಿ ರದ್ದು ಮಾಡ್ತೀವಿ ಅನ್ನೋದು ಸರಿಯಲ್ಲ ಎಂದು ಹೇಳಿದರು.
ಗೋ ಹತ್ಯೆ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಮೊದಲು ಹತ್ತತ್ತು ಆಕಳು ಸಾಕಲಿ. ಗೋ ಹತ್ಯೆ, ಕೋಮುವಾದದಂತಹ ಭಾವನಾತ್ಮಕ ವಿಚಾರ ತುಂಬಿ, ಗಲಭೆ ಮಾಡಿ ಚುನಾವಣೆ ಗೆಲ್ತಾರೆ. ಆರೆಸ್ಸೆಸ್, ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳಿದ್ದಾರೆ ಎಂದರು.
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬಳಸಬೇಡಿ: ಅನಂತಕುಮಾರ ಹೆಗಡೆ
ಪ್ರಧಾನಿ ಮೋದಿ ಅವರಿಗೆ ತಾವು ಮಾತನಾಡಿದ ಕೆಲಸಗಳನ್ನೇ ಮಾಡಲು ಆಗಿಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಏನೇನೋ ಮಾಡ್ತೀವಿ ಅಂತ ಇದ್ದರು. ಆದರೆ ಏನೂ ಮಾಡಿಲ್ಲ ಎಂದು ಸಚಿವರು ಟೀಕಿಸಿದರು.
ಸಂಸದ ಪ್ರಹ್ಲಾದ ಜೋಶಿ ಹೇಳಿಕೆ ಮೂರ್ಖತನದ ಪರಮಾವಧಿ. ಗಲಭೆ ಸೃಷ್ಟಿಸುವುದಕ್ಕಾಗಿಯೇ ಧರ್ಮದ ಹೆಸರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೋಶಿ ಒಂದು ಸಲ ವಾಜಪೇಯಿ, ಒಮ್ಮೆ ಯಡಿಯೂರಪ್ಪ ಮತ್ತೊಮ್ಮೆ ಮೋದಿ ಗಾಳಿಯಲ್ಲಿ ಗೆದ್ದು ಬಂದಿದ್ದಾರೆ. ತಮ್ಮನ್ನು ಸೀನಿಯರ್ ಅಂದುಕೊಳ್ಳುತ್ತಾರೆ. ಆದರೆ ಅವರಿಗಿಂದ ಐದು ವರ್ಷದ ಮೊದಲೇ ನಾನು ಜನಪ್ರತಿನಿಧಿಯಾಗಿದ್ದೇನೆ. ನಾನೇ ಅವರಿಗಿಂತ ಸೀನಿಯರ್ ಎಂದರು ವಿನಯ ಕುಲಕರ್ಣಿ