ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ
ಧಾರವಾಡ, ಜೂನ್ 13: ಈಗಾಗಲೇ ರಾಜ್ಯದಲ್ಲಿ ಮಂಗನ ಕಾಯಿಲೆ, ಡೆಂಗ್ಯೂ, ಚಿಕೂನ್ ಗುನ್ಯ ಇನ್ನಿತರೆ ರೋಗಗಳಿಂದ ಜನತೆ ಬಳಲುತ್ತಿದ್ದಾರೆ. ಇದೀಗ ಒಂಟಿ ಮಂಗವೊಂದು ಗ್ರಾಮದ 20 ಮಂದಿಗೆ ಕಚ್ಚಿದ್ದು ಗ್ರಾಮದಲ್ಲಿ ಆತಂಕ ಮನೆಮಾಡಿದೆ.
ಮಂಗ ಹಾಗೆ ಏಕಾಏಕಿ ಎಲ್ಲರಿಗೂ ಕಚ್ಚಲು ಕಾರಣವೇನು ಅದಕ್ಕೆ ಹುಚ್ಚು ಹಿಡಿದಿದೆಯೇ ಅಥವಾ ಆರೋಗ್ಯ ಸರಿ ಇದ್ದೂ ಈ ರೀತಿ ಮಾಡಿದೆಯಾ ಎನ್ನುವುದೇ ತಿಳಿದುಬಂದಿಲ್ಲ. ಧಾರವಾಡದ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ 21 ಮಂದಿಗೆ ಮಂಗನ ಕಾಯಿಲೆ ಚಿಕಿತ್ಸೆ
ದಿನಕ್ಕೊಬ್ಬರ ಮೇಲೆ ದಾಳಿ ಮಾಡುತ್ತಿರುವ ಮಂಗನನ್ನು ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎರಡು ವಾರಗಳಿಂದ ಗ್ರಾಮದಲ್ಲಿ ಮಂಗನ ಹಾವಳಿ ಹೆಚ್ಚಾಗಿದ್ದು, 20 ಜನರನ್ನು ಕಚ್ಚಿ ಗಾಯಗೊಳಿಸಿದೆ.
ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗನ ಅಟ್ಟಹಾಸದಿಂದ ಮನೆ ಬಿಟ್ಟು ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಗ್ರಾಮದ ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ಗಾಯಗೊಳಿಸಿದೆ. ಇದೀಗ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗನನ್ನು ಹಿಡಿಯಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.