ಹತ್ಯೆಯಾದ BJP ಮುಖಂಡ ಯೋಗೇಶ್ ಪರ ವಕೀಲನಿಗೆ ಸಚಿವನಿಂದ ಧಮ್ಕಿ
ಧಾರವಾಡ, ನವೆಂಬರ್ 24: ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಯೋಗೇಶ ಗೌಡ ಪರ ವಕೀಲ ಆನಂದ್ ಎನ್ನುವರಿಗೆ ಧಾರವಾಡ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ.
ಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನ
ಈ ಬಗ್ಗೆ ಸಚಿವರ ವಿನಯ್ ಕುಲಕರ್ಣಿ ಅವರು ವಕೀಲ ಆನಂದ್ ಅವರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿರುವ ಆಡಿಯೋ ತುಣುಕು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದನ್ನು ನೋಡಿದರೆ ಯೋಗೇಶ್ ಗೌಡ ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಕೈವಾಡವಿದೆಯೇ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ಸ್ವತಃ ವಕೀಲ ಆನಂದ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಚಿವರಿಂದ ತಮಗೆ ಬೆದರಿಕೆ ಇದೆ ಎಂದು ಹೇಳಿದರು. "ನಿನ್ನೆ ನನ್ನನ್ನು ನಾಲ್ಕು ಕಾರುಗಳಲ್ಲಿ ಕೆಲವು ಅಪರಿಚಿತರು ಧಾರವಾಡದಿಂದ ಹಂಗರಕಿವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಾನು ಹೆದರಿಕೆಯಿಂದಲೇ ಮನೆಗೆ ಹೋದೆ" ಎಂದು ಆನಂದ್ ಹೇಳಿಕೊಂಡಿದ್ದಾರೆ.
ನಾನು ಹತ್ಯೆಯಾದ ಯೋಗೀಶ್ ಅವರ ಕುಟುಂಬಕ್ಕೆ ಕಾನೂನು ನೆರವು ನೀಡುತ್ತಿದ್ದೆ. ಇದಕ್ಕೆ ಸಚಿವರಿಂದ ವಿರೋಧ ವ್ಯಕ್ತವಾಗಿತ್ತು. ನನಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದೆಲ್ಲಾ ನಿಂದಿಸಿದ್ದಾರೆ. ಹಾಗಾಗಿ ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಆದರೆ, ಈ ಆರೋಪವನ್ನು ವಿನಯ್ ಕುಲಕರ್ಣಿ ಅಲ್ಲಗಳೆದಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಕೈವಾಡವಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
2016 ಜೂನ್ 15ರ ಮುಂಜಾನೆ ಯೋಗೇಶ್ ಗೌಡ ಕೊಲೆ ನಡೆದಿತ್ತು.