ನನ್ನ ಹೆಸರಿಗೆ ಮಸಿ ಬಳಿಸುವ ಯತ್ನ: ವಿನಯ್ ಕುಲಕರ್ಣಿ
ಧಾರವಾಡ, ಫೆಬ್ರವರಿ 03: ವಿನಯ್ ಕುಲಕರ್ಣಿ ಅವರ ಬೆಂಬಲಿಗರು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ ಬರೆದಿದ್ದಾರೆ ಎಂಬ ಆರೋಪದ ಬಗ್ಗೆ ಸಚಿವ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದು, 'ನನ್ನ ವಿರುದ್ಧ ಬಿಜೆಪಿ ಮಾಡುತ್ತಿರುವ ಷಡ್ಯಂತ್ರ' ಎಂದಿದ್ದಾರೆ.
ನವಲಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಹ್ಲಾದ್ ಜೋಶಿ ಅವರು ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ, ನನ್ನ ಹೆಸರು ಬಳಸಿ ಅವರೇ ಪತ್ರ ಬರೆಸಿ ನನ್ನ ಹೆಸರು ಹಾಳಾಗುವಂತೆ ಮಾಡಿರುವ ಕುತಂತ್ರ ಸಹ ಇರಬಹುದು' ಎಂದು ಅವರು ಅಭಿಪ್ರಾಯಪಟ್ಟರು.
ಸಂಸದ ಪ್ರಹ್ಲಾದ್ ಜೋಶಿಗೆ ಕೊಲೆ ಬೆದರಿಕೆ ಪತ್ರ
ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು ಅದರಲ್ಲಿ 'ವಿಕೆ ಬಾಸ್ (ವಿನಯ್ ಕುಲಕರ್ಣಿ) ಅವರ ತಂಟೆಗೆ ಬಂದರೆ ಯೋಗೀಶ್ ಗೌಡನಿಗೆ ಆದ ಗತಿಯೇ ಆಗುತ್ತದೆ' ಎಂದು ಬರೆಯಲಾಗಿತ್ತು. ಇದನ್ನು ವಿನಯ್ ಕುಲಕರ್ಣಿ ಬೆಂಬಲಿಗರೇ ಬರೆದಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಪತ್ರದ ಬಗ್ಗೆ ಸಂಸದರು ಪೊಲೀಸ್ ದೂರು ಸಹ ನೀಡಿದ್ದಾರೆ.
ಪ್ರಹ್ಲಾದ್ ಜೋಶಿ ಅವರಿಗೆ ಹೋಗಿರುವ ಪತ್ರಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದ ಅವರು 'ಹಾಗೇನಾದರೂ ಯಾರಿಗಾದರೂ ಏನಾದರೂ ಹೇಳಬೇಕೆಂದಿದ್ದರೆ ನೇರವಾಗಿಯೇ ಹೇಳುತ್ತೇನೆ, ಹೀಗೆ ಹೇಡಿತನದ ಕೆಲಸ ಮಾಡುವ ಅಗತ್ಯ ನನಗಿಲ್ಲ' ಎಂದರು.
ಈ ಮುಂಚೆಯೂ ಈ ರೀತಿಯ ಪಿತೂರಿಗಳು ನನ್ನ ವಿರುದ್ಧ ಆಗಿವೆ. ನನ್ನ ವಿರುದ್ಧ ಷಡ್ಯಂತ್ರಗಳು ನಡೆಯುತ್ತಲೇ ಇರುತ್ತವೆ ಎಂದ ಅವರು ಪ್ರಹ್ಲಾದ್ ಜೋಶಿ ಅವರ ಬಗ್ಗೆಯೂ ನನಗೆ ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.