ಜೋಶಿ, ಜಗದೀಶ್ ಶೆಟ್ಟರ್ ರಾಜೀನಾಮೆಗೆ ಒತ್ತಾಯಿಸಿದ ಯತ್ನಾಳ್
ಹುಬ್ಬಳ್ಳಿ,ಮಾರ್ಚ್,18: ಕಳಸಾ ಬಂಡೂರಿ ವಿಷಯದಲ್ಲಿ ರೈತ ಸಮುದಾಯಕ್ಕೆ ಬೆಂಬಲ ನೀಡದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ನಾಯಕರು ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಒತ್ತಡ ಹೇರಬೇಕಾಗಿತ್ತು. ಆದರೆ ರೈತರ ಬಗ್ಗೆ ಗಮನವಹಿಸದೆ ನಾಯಕರು ಅಧಿವೇಶನ ಮತ್ತು ಎಲ್ಲ ಕಡೆ ಕೇವಲ ವಾಚ್ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ' ಎಂದು ಯತ್ನಾಳ ದೂರಿದರು.[ಕಳಸಾ-ಬಂಡೂರಿಗಾಗಿ ಏ.18ರಂದು ಕರ್ನಾಟಕ ಬಂದ್]
ಗೋವಾ ರಾಜ್ಯದಲ್ಲಿ ಕೇವಲ 3 ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಲ್ಲಿ 17 ಬಿಜೆಪಿ ಶಾಸಕರಿದ್ದು ಮೋದಿ ನಮ್ಮ ರಾಜ್ಯದ ಜನರ ಬೇಡಿಕೆಗೆ ಖಂಡಿತ ಸ್ಪಂದಿಸುತ್ತಾರೆ.[ಕಳಸಾ ಬಂಡೂರಿ, ಪ್ರಹ್ಲಾದ್ ಜೋಶಿ ಮೇಲೆ ರೈತರ ಕೆಂಗಣ್ಣು]
ಆದರೆ ರೈತರ ಬಗ್ಗೆ ಕಾಳಜಿ ಇಲ್ಲದ ಜೋಶಿ ಮತ್ತು ಶೆಟ್ಟರ್ ವಾಜಪೇಯಿಯವರ ನದಿ ಜೋಡಣೆ ಕನಸನ್ನು ಕೂಡ ಗಾಳಿಗೆ ತೂರಿದ್ದಾರೆ. ನದಿಗಳ ಜೋಡಣೆ ಒಂದೆಡೆ ಆರಂಭವಾದರೆ ಇಡೀ ದೇಶಾದ್ಯಂತ ರೈತರ ಸಮಸ್ಯೆಗಳು ಪರಿಹಾರವಾಗಲಿವೆ ಎಂದರು.[ತೀವ್ರಗೊಂಡ ಕಳಸಾ ಹೋರಾಟ : ಹುಬ್ಬಳ್ಳಿಯಲ್ಲಿ ರೈಲು ಬಂದ್]
ಜೋಶಿ ಮತ್ತು ಶೆಟ್ಟರ್ ರಾಜ್ಯ ನಾಯಕರಲ್ಲ :
'ಜೋಶಿ ಮತ್ತು ಶೆಟ್ಟರ್ ಕೇವಲ ಧಾರವಾಡ ಜಿಲ್ಲೆಯ ನಾಯಕರು, ರಾಜ್ಯದ ನಾಯಕರಲ್ಲ'ಎಂದು ಯತ್ನಾಳ ವ್ಯಂಗ್ಯವಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಡೀ ರಾಜ್ಯಕ್ಕೆ ನಾಯಕರು. ಆದರೆ ಜೋಶಿ ಮತ್ತು ಶೆಟ್ಟರ್ ಅವರು ಯಡಿಯೂರಪ್ಪನವರಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿರುವ ಯತ್ನಾಳ, ಯಡಿಯೂರಪ್ಪನವರನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಸಂಚು ನಡೆಸಿದ್ದಾರೆ ಎಂದು ದೂರಿದರು.[ಮೈಸೂರು: ಬಿಎಸ್ ವೈ ಸೇರಿ ಇತರ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ]