ಹಲ್ಲೆ ಮಾಡಿದ್ದು ನಾನಲ್ಲ ಅವರು: ಯೋಗೀಶ್ ಗೌಡ ಪತ್ನಿ ಮಲ್ಲಮ್ಮ
ಧಾರವಾಡ, ಜನವರಿ 02: ಕೊಲೆಯಾಗಿದ್ದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಪತ್ನಿ ಮಲ್ಲಮ್ಮಗೌಡರ ತನ್ನ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿಯನ್ನು ಮಲ್ಲಮ್ಮ ತಳ್ಳಿ ಹಾಕಿದ್ದು, ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸೇರಿದ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ
ಮಲ್ಲಮ್ಮ ಅವರು ಬೆಂಬಲಿಗರೊಂದಿಗೆ ತಮ್ಮ ಅಕ್ಕ ಶೋಭಾ, ತಂಗಿ ಸುಮಾ, ತಮ್ಮನ ಪತ್ನಿ ಅಂಜನಾ ಹಾಗೂ ಯೋಗೇಶ್ ಗೌಡ ಅಕ್ಕ ಅಕ್ಕಮಹಾದೇವಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು, ಈ ಸಂಬಂಧ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಆದರೆ ಆರೋಪವನ್ನು ಮಲ್ಲಮ್ಮ ತಳ್ಳಿ ಹಾಕಿದ್ದಾರೆ.
ನಾನು ಕಾಂಗ್ರೆಸ್ ಪಕ್ಷ ಸೇರಿದ್ದನ್ನು ಸಹಿಸದೇ, ನನ್ನ ಮೇಲೆ ಗುರುನಾಥಗೌಡ ಸಹೋದರಿ ಅಕ್ಕಮಹಾದೇವಿ ಹಲ್ಲೆ ಮಾಡಿದ್ದಾರೆ, ನಮ್ಮ ನಮ್ಮ ನಡುವೆ ಜಗಳ ಹಚ್ಚುವ ಕೆಲಸ ಗುರುನಾಥಗೌಡ, ಬಸವರಾಜ್ ಕೊರವರ ಮಾಡುತ್ತಿದ್ದಾರೆ ಎಂದು ಮಲ್ಲಮ್ಮ ಆರೋಪಿಸಿದ್ದಾರೆ.
ಏನು ಘಟನೆ ನಡೆಯಿತು ಎಂಬುದನ್ನು ಊರಿನ ಜನ ನೋಡಿದ್ದಾರೆ, ಗುರುನಾಥ ಕಡೆಯವರೇ ಘಟನೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ ಅದನ್ನು ಬೇಕಿದ್ದರೆ ಮಾಧ್ಯಮಗಳಿಗೆ ನೀಡಲಿ ಎಂದು ಅವರು ಹೇಳಿದ್ದಾರೆ.
ಚಿಲ್ಲರೆ ರಾಜಕೀಯ ಮಾಡುತ್ತಿರುವ ಗುರುನಾಥ ಗೌಡ ಅವರು ಸುಳ್ಳು ದೂರುಗಳನ್ನು ಕೊಡುವುದು ಬಿಟ್ಟು ನೇರವಾಗಿ ಬಂದು ನಮ್ಮನ್ನು ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿರುವ ಮಲ್ಲಮ್ಮ, ಇವರು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರ ಹೆಸರನ್ನು ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಸಲು ಯತ್ನಿಸಿದ್ದರು ಎಂದು ಆರೋಪಮಾಡಿದ್ದಾರೆ.