ಕರ್ನಾಟಕ ವಿವಿ ವಿದ್ಯಾರ್ಥಿ ಮೇಲೆ ಹಲ್ಲೆ, ಕ್ರಮಕ್ಕೆ ಒತ್ತಾಯ
ಹುಬ್ಬಳ್ಳಿ, ಡಿಸೆಂಬರ್, 17: ಕರ್ನಾಟಕ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಮೇಲೆ ವಿನಾ ಕಾರಣ ಹಲ್ಲೆ ಮಾಡಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವಿವಿ ಸಂಶೋಧನಾ ವಿದ್ಯಾರ್ಥಿ ಸಂಘ, ವಿವಿ ಕುಲಪತಿ ಡಾ. ಪ್ರಮೋದ ಗಾಯಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿ ಮಂಜುನಾಥ ಅಡಿಗಲ್ ಎಂಬುವರ ಮೇಲೆ ಕೆಲವು ದಿನಗಳ ಹಿಂದೆ ಸುಮಾರು 30 ಕ್ಕೂ ಹೆಚ್ಚು ಜನರು ಹಾಡುಹಗಲೇ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಕುಲಪತಿ ಅವರಿಗೆ ಮನವಿ ಸಲ್ಲಿಸಿದ್ದು, ಶೀಘ್ರವೇ ಒತ್ತಾಯಿಸುವುದಾಗಿ ಪ್ರಮೋದ್ ಗಾಯಿ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.[ಧಾರವಾಡದ ಕರ್ನಾಟಕ ವಿವಿಯಲ್ಲಿ ಏನಿದು ಅಕ್ರಮ?]
ಮನವಿ ಪತ್ರದಲ್ಲಿ ಏನಿದೆ?
ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಮೋದ ಗಾಯಿ ಅವರಿಗೆ ನೀಡಿದ ಮನವಿ ಪತ್ರದಲ್ಲಿ, ಹಲ್ಲೆ ನಡೆದು ಹಲವು ದಿನ ಕಳೆದಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ಪೊಲೀಸ್ ಕಾರ್ಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿಯೇ ಇದ್ದಾರೆ. ತಕ್ಷಣವೇ ಹಲ್ಲೆಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಒತ್ತಡ ಹೇರಬೇಕು ಎಂದು ಸಂಘದ ಕಾರ್ಯಕರ್ತರು ತಿಳಿಸಿದ್ದಾರೆ.[ಕರ್ನಾಟಕದ ಒಂದು ವಿವಿ ಸೇರಿ ನಕಲಿ ವಿವಿಗಳ ಪಟ್ಟಿ ಪ್ರಕಟ]
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರು, ರವಿ ಮಟ್ಟಿಹಾಳ, ಮಹಾದೇವ ಜಿ, ಆನಂದ ಬಾರಿಕರ ಮುಂತಾದವರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.