ಹೀರೋ ಮೋಟೊಕಾರ್ಪ್ ಗೆ ಕೈ ಕೊಟ್ಟ ಕರ್ನಾಟಕ
ಧಾರವಾಡ, ಸೆ. 18 : ಸುಮಾರು 20 ಸಾವಿರ ಉದ್ಯೋಗ ಸೃಷ್ಟಿಸುತ್ತಿದ್ದ ಹೀರೋ ಮೋಟೊಕಾರ್ಪ್ ಘಟಕ ಪಕ್ಕದ ಆಂಧ್ರಪ್ರದೇಶದ ಪಾಲಾಗುತ್ತಿದೆ. ಧಾರವಾಡದಲ್ಲಿ ಸ್ಥಾಪನೆಯಾಗಬೇಕಿದ್ದ ಘಟಕ ಚಿತ್ತೂರಿಗೆ ಹೋಗುತ್ತಿದೆ. ನೂತನ ಕೈಗಾರಿಕಾ ನೀತಿ ರಚಿಸುವ ಉತ್ಸಾಹದಲ್ಲಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಘಟಕವನ್ನು ಕಳೆದುಕೊಂಡಿದೆ.
ಸುಮಾರು 2,200 ಕೋಟಿ ರೂ. ಬಂಡವಾಳ ಹೂಡಿಕೆಯ ಹೀರೋ ಮೋಟೊಕಾರ್ಪ್ನ 1.8 ಮಿಲಿಯನ್ ಸಾಮರ್ಥ್ಯದ ದ್ವಿಚಕ್ರ ವಾಹನ ತಯಾರಿಕಾ ಘಟಕ ಧಾರವಾಡ ಸಮೀಪದ ಮಮ್ಮಿಗಟ್ಟಿಯಲ್ಲಿ ನಿರ್ಮಾಣವಾಗಬೇಕಿತ್ತು. ಘಟಕ ಕರ್ನಾಟಕದ ಕೈ ತಪ್ಪುವುದಿಲ್ಲ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಅದು ಸದ್ಯ ಚಿತ್ತೂರಿಗೆ ಸ್ಥಳಾಂತರಗೊಂಡಿದೆ. [ಹೀರೋಗೆ ಕೈ ಕೊಟ್ಟ ಹೋಂಡಾ ಮೋಟರ್ಸ್]
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಚಿತ್ತೂರಿನಲ್ಲಿ ಘಟಕ ಸ್ಥಾಪಿಸುವ ಬಗ್ಗೆ ಕಂಪನಿಯೊಂದಿಗೆ ಮಾತನಾಡಿ ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದಾರೆ. ಆಂಧ್ರಪ್ರದೇಶಕ್ಕೆ ಕೇಂದ್ರ ನೀಡುವ ಅನುದಾನ, ರಾಜ್ಯ ನೀಡಿದ ತೆರಿಗೆ ವಿನಾಯಿತಿ ಮುಂತಾದವುಗಳನ್ನು ಲೆಕ್ಕಾಚಾರ ಹಾಕಿರುವ ಕಂಪನಿ ಘಟಕವನ್ನು ಅಲ್ಲಿಗೆ ಸ್ಥಳಾಂತರ ಮಾಡಲು ನಿರ್ಧರಿಸಿದೆ. [ಧಾರವಾಡದಲ್ಲಿ ಹೀರೋಹೊಂಡಾ ಘಟಕ]
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸದಾ ಬದ್ಧ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟಕ ನಿರ್ಮಾಣ ಕುರಿತು ಹೆಚ್ಚಿನ ಆಸಕ್ತಿ ವಹಿಸದ ಕಾರಣ ಮೋಟೊಕಾರ್ಪ್ ನೆರೆಯ ರಾಜ್ಯದ ಪಾಲಾಗಿದೆ ಎಂಬ ಆರೋಪವೂ ಇದೆ. ಇದನ್ನು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಯೂ ಹೇಳಿದ್ದರು. ಕರ್ನಾಟಕ ಸರ್ಕಾರ 300 ಎಕರೆ ಜಾಗವನ್ನು ಘಟಕಕ್ಕಾಗಿ ಮೀಸಲಾಗಿಟ್ಟಿತ್ತು. ನೋಂದಣಿ ಶುಲ್ಕ ಸೇರಿದಂತೆ ಹಲವು ರಿಯಾಯಿತಿ ಘೋಷಿಸಿತ್ತು.
ಆದರೆ, ಆಂಧ್ರಪ್ರದೇಶ ಹೆಚ್ಚುವರಿ ಸೌಲಭ್ಯಗಳನ್ನು ಘಟಕಕ್ಕೆ ನೀಡುವುದಾಗಿ ಹೇಳಿ ಅಲ್ಲಿ ಘಟಕ ಸ್ಥಾಪಿಸುವಂತೆ ಕಂಪನಿ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಚಿತ್ತೂರು ಜಿಲ್ಲೆಯ ಶ್ರೀ ಸಿಟಿಯ ವಿಶೇಷ ಆರ್ಥಿಕ ವಲಯ ಪ್ರದೇಶದಲ್ಲಿ ಅನುಕೂಲಕರ ಜಾಗ ಆಯ್ಕೆ ಮಾಡಿಕೊಳ್ಳಲು ಕಂಪನಿ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟಕ ಉಳಿಸಿಕೊಳ್ಳು ಹೊಸ ಸೌಲಭ್ಯವನ್ನು ಘೋಷಿಸುತ್ತಾರೆಯೇ ಕಾದು ನೋಡಬೇಕು.
ಇದು ಕಾರಣವಿರಬಹುದೇ? : ಚಿತ್ತೂರು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಿದರೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ಚಿತ್ತೂರು ತಲುಪಲು ರಾಷ್ಟ್ರೀಯ ಹೆದ್ದಾರಿ 4 ಹಾಗೂ ಬೆಂಗಳೂರು-ತಿರುಪತಿ ಹೆದ್ದಾರಿಯನ್ನು ಬಳಸಿದರೆ ಕೇವಲ ಮೂರು ತಾಸುಗಳ ಹಾದಿ. ಆದ್ದರಿಂದ ಅಲ್ಲಿ ಘಟಕ ಸ್ಥಾಪನೆ ಮಾಡಲು ಕಂಪನಿ ಮುಂದಾಗಿಯೇ ಎಂಬ ಪ್ರಶ್ನೆಗಳು ಇವೆ.