'ಕುಸ್ತಿ ಹಬ್ಬ'ದಲ್ಲಿ ಮಿಂಚಿದ ಅಂತಾರಾಷ್ಟ್ರೀಯ ಕುಸ್ತಿ ಕಲಿಗಳು
ಧಾರವಾಡ, ಫೆಬ್ರವರಿ 25: ಧಾರವಾಡದಲ್ಲಿ ಕಳೆದ ನಾಲ್ಕು ದಿನಗಳಿಂದ ಆಯೋಜಿಸಿದ್ದ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾದ ನಾಲ್ಕು ದಿನಗಳ ಕರ್ನಾಟಕ ಕುಸ್ತಿ ಹಬ್ಬ ಮಂಗಳವಾರ ಸಂಜೆ ವರ್ಣ ರಂಜಿತ ತೆರೆ ಕಂಡಿತು. ಅಂತಾರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳು, ಪುರುಷ ಕುಸ್ತಿ ಪಟುಗಳು ಆಗಮಿಸಿ ಕುಸ್ತಿ ಆಟವಾಡಿ ಸಾರ್ವಜನಿಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಕರ್ನಾಟಕ ಕಾಲೇಜು ಆವರಣದಲ್ಲಿ ಕರ್ನಾಟಕ ಕುಸ್ತಿ ಹಬ್ಬದಲ್ಲಿ ವಿಜೇತರಾದ ಕುಸ್ತಿ ಪಟುಗಳಿಗೆ ಬಾಲ ಕೇಸರಿ, ಕರ್ನಾಟಕ ಕಿಶೋರ, ಕಿಶೋರಿ, ಕರ್ನಾಟಕ ಕೇಸರಿ, ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಳು ಸೇರಿ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.
ಫೆಬ್ರವರಿ 22 ರಿಂದ ರೋಚಕ 'ಕರ್ನಾಟಕ ಕುಸ್ತಿ ಹಬ್ಬ'
ಪದ್ಮಶ್ರೀ ಪುರಸ್ಕೃತ ಹಾಗೂ ಒಲಂಪಿಯನ್ ಏಷಿಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕರ್ತಾರ್ ಸಿಂಗ್, ಒಲಂಪಿಕ್ ಕಂಚಿನ ಪದಕ ವಿಜೇತ ಮತ್ತು ಪದ್ಮಶ್ರೀ ಹಾಗೂ ಅರ್ಜುನ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಯೋಗೇಶ್ವರ್ ದತ್ತ ಅವರು ಆಗಮಿಸಿ ಕುಸ್ತಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದರು.
ಕೊನೆಯ ದಿನ ಕುಸ್ತಿ ಹಬ್ಬಕ್ಕೆ ಗ್ರಾಮೀಣ ಭಾಗದ ಜನರು ಸೇರಿ ರೋಚಕವಾಗಿ ಕುಸ್ತಿ ಪಂದ್ಯವನ್ನು ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನರು ಇಂದು ವೀಕ್ಷಿಸಿದರು. ಈ ಚಾರಿತ್ರಿಕ ಕುಸ್ತಿ ಹಬ್ಬಕ್ಕೆ ಧಾರವಾಡದ ಕಾಲೇಜು ಮೈದಾನ ಆವರಣವು ಸಾಕ್ಷಿಯಾಯಿತು.