ವೀರಶೈವ ಸಮಾವೇಶ ಅಲ್ಲ. ಅದು ಪಂಚಾಚಾರ್ಯರ ಸಮಾವೇಶ
ಧಾರವಾಡ, ಡಿಸೆಂಬರ್ 26 : ಗದಗದಲ್ಲಿ ನಡೆಸುತ್ತಿರುವ ವೀರಶೈವ ಸಮಾವೇಶ ನಿಜಕ್ಕೂ ವೀರಶೈವರ ಸಮಾವೇಶ ಅಲ್ಲ. ಅದು ಒಂದು ಪಂಚಾಚಾರ್ಯರ ಸಮಾವೇಶ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಮಾದಾರ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ವೀರಶೈವರು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದು ಅವರ ಅಭಿಪ್ರಾಯ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿದೆ. ಆ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಯಾರೂ ಲಿಂಗಾಯತರಲ್ಲ. ಹೀಗಿರುವಾಗ ಲಿಂಗಾಯತರ ಪರವಾಗಿಯೇ ವರದಿ ಬರುತ್ತದೆ ಎನ್ನುವುದು ಸರಿಯೇ? ಎಂದು ಅವರು ಪ್ರಶ್ನಿಸಿದರು.
ಈ ಸಮಿತಿ ವರದಿ ಸಂಬಂಧ ತಿಪ್ಪಣ್ಣ ಎನ್ನುವವರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಅವರು ಭವಿಷ್ಯ ನುಡಿದಿದ್ದು ಸರಿಯೇ?, ಗದಗಿನಲ್ಲಿ ನಡೆಯುತ್ತಿರುವ ಸಮಾವೇಶವನ್ನು ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಉದ್ಘಾಟಿಸಿದ್ದಾರೆ. ಲಿಂಗಾಯತರ ಧರ್ಮಗ್ರಂಥ ವಚನಶಾಸ್ತ್ರ ಎಂದು ಈ ಹಿಂದೆ ಶ್ಯಾಮನೂರು ಶಿವಶಂಕರಪ್ಪ ಅವರೇ ಹೇಳಿದ್ದರು. ಆದರೆ, ಇದೀಗ ಅವರು ಪಂಚಾಚಾರ್ಯರ ಜೊತೆ ಸೇರಿ ಸಿದ್ಧಾಂತ ಶಿಖಾಮಣಿ ತಮ್ಮ ಗ್ರಂಥ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.