ಆ.28ಕ್ಕೆ ಕೇಂದ್ರ ಸಚಿವರಿಂದ ಧಾರವಾಡ ಐಐಟಿ ಉದ್ಘಾಟನೆ
ಹುಬ್ಬಳ್ಳಿ, ಆಗಸ್ಟ್, 27: ಧಾರವಾಡದ ವಾಲ್ಮಿ ಕಟ್ಟಡದಲ್ಲಿ ಆ.28ರ ಭಾನುವಾರದಂದು ಐಐಟಿ ಉದ್ಘಾಟನೆಗೊಳ್ಳಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗಾವಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬಳಿ ಬೇಲೂರು ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ವಾಲ್ಮೀ ಕಟ್ಟಡದಲ್ಲಿ ಮಧ್ಯಾಹ್ನ 3.15ಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಐಐಟಿ ತಾತ್ಕಾಲಿಕ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಸುಮಾರು 25 ನಿಮಿಷಗಳ ಕಾಲ ಕೇಂದ್ರ ಸಚಿವ ಮತ್ತು ಮುಖ್ಯಮಂತ್ರಿಗಳು ಐಐಟಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು. ನಂತರ ವಾಲ್ಮೀ ಕ್ಯಾಂಪಸ್ ಅನ್ನು ಪರಿಶೀಲಿಸುವರು. ಸಂಜೆ 4ಕ್ಕೆ ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಪವರ್ ಪಾಯಿಂಟ್ ಮೂಲಕ ಐಐಟಿ ಕುರಿತು ಮಾಹಿತಿ ನೀಡಲಾಗುವುದು.[ಹುಬ್ಬಳ್ಳಿ-ಧಾರವಾಡದಲ್ಲೇ ಬೀಡು ಬಿಟ್ಟಿರುವ ಮನೆಗಳ್ಳರು]
ಜಿಲ್ಲೆಯ 1200ಕ್ಕೂ ಹೆಚ್ಚು ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಐಐಟಿಯ ಕುರಿತು ಮಾಹಿತಿ ಇರುವ 5 ಸಾವಿರ ಕರಪತ್ರಗಳನ್ನು ಹಂಚಲಾಗುತ್ತಿದ್ದು, ಮೂರು ಸಾವಿರ ಜನರು ಸಭೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಎಲ್ಲೆಡೆ ಎಲ್ ಸಿಡಿ ಪರದೆ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮದ ನೇತೃತ್ವವನ್ನು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ವಹಿಸಿಕೊಂಡು, ಸಿದ್ಧತೆಗಳನ್ನು ಸ್ವತಃ ಪರಿಶೀಲಿಸುತ್ತಿದ್ದಾರೆ.
ಐಐಟಿ ಉದ್ಘಾಟನೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಧಾರವಾಡದ ನಗರದೆಲ್ಲೆಡೆ ಫ್ಲೆಕ್ಸ್ ಗಳನ್ನು ಹಾಕಿವೆ. ಕಾಂಗ್ರೆಸ್ ಪಕ್ಷದವರು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಭಾವಚಿತ್ರವನ್ನು ಹಾಕಿದ್ದರೆ, ಬಿಜೆಪಿಯವರು ಕೇಂದ್ರ ಸಚಿವರ ಭಾವಚಿತ್ರ ಮಾತ್ರ ಹಾಕಿ ಕಾಂಗ್ರೆಸ್ ನಾಯಕರ ಯಾವುದೇ ಫೋಟೋ ಹಾಕಿಲ್ಲ.[ಹುಬ್ಬಳ್ಳಿ: ನಾಲ್ವರು ಕೊಲೆ ಆರೋಪಿಗಳ ಬಂಧನ]
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಸಚಿವರಾದ ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡ್, ವಿನಯ ಕುಲಕರ್ಣಿ, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ, ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ, ಉಮಾಶ್ರೀ, ರಮೇಶ ಜಾರಕಿಹೊಳಿ, ರುದ್ರಪ್ಪ ಲಮಾಣಿ, ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.