ಉತ್ತರ ಕರ್ನಾಟಕದವರೇ ಮುಂದಿನ ಸಿಎಂ: ಹೆಸರು ಸಮೇತ ಹೇಳಿದ ಸಚಿವ ಕತ್ತಿ
ಧಾರವಾಡ, ಜುಲೈ 12: "ಕರ್ನಾಟಕ ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ, ಮುಂದೆ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು,'' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಭವಿಷ್ಯ ನುಡಿದರು.
ಸೋಮವಾರ ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಉಮೇಶ್ ಕತ್ತಿ, "ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ, ಸುಮ್ಮನಿರಲ್ಲ. ಈ ಭಾಗದ ಜನರ ಸಹಕಾರದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕಟ್ಟುವುದು ಶತ ಸಿದ್ಧ,'' ಎಂದು ಮತ್ತೊಮ್ಮೆ ರಾಜ್ಯ ವಿಭಜನೆಯ ಮಾತುಗಳನ್ನಾಡಿದರು.
"ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಮಾಡಿಲ್ಲ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ,'' ಎಂಬ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ್ ಪರ ಬ್ಯಾಟ್ ಮಾಡಿದ ಸಚಿವ ಉಮೇಶ್ ಕತ್ತಿ, "ಮುಂದಿನ ಮುಖ್ಯಮಂತ್ರಿ ಬೆಲ್ಲದ್, ನಿರಾಣಿ ಅಥವಾ ನಾನೇ ಆಗಬಹುದು. ಶಾಸಕ, ಸಚಿವ, ಮುಖ್ಯಮಂತ್ರಿ ಬಳಿಕ ಪ್ರಧಾನಿ ಆಗುವ ಆಸೆಯೂ ಇದೆ,'' ಎಂದು ಹೇಳಿದರು.
Recommended Video
"ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದರೆ, ಸಿಬಿಐ, ಇಡಿ ಇದೆ. ಬೇಕಿದ್ದರೇ, ಕೋರ್ಟ್ಗೂ ಹೋಗಲಿ,'' ಎಂದು ಸವಾಲು ಹಾಕಿದರು.